ಹೆಸರಘಟ್ಟ: ಗೋಪಾಲಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 2024- 25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ, 16 ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು.
ಗರ್ಭಿಣಿಯರಿಗೆ ಮಡಿಲು ತುಂಬಿ, ಹೊಸಕೆ ಶಾಸ್ತ್ರ, ಆರತಿ ಮಾಡಿ ಸೀಮಂತ ಕಾರ್ಯ ನೆರವೇರಿಸಲಾಯಿತು.
‘ಸಂಘದ ಬಂಡವಾಳದಿಂದ ಆಭರಣ ಸಾಲ, ಅಡಮಾನ ಸಾಲ, ವ್ಯಾಪಾರ ಸಾಲ ನೀಡಲಾಗಿದೆ ರೈತರು ಮತ್ತು ಸ್ತ್ರೀ ಶಕ್ತಿ ಸಂಘಗಳು ಸಂಘದ ವತಿಯಿಂದ ದೊರೆಯುವ ಸಾಲ ಸೌಲಭ್ಯಗಳನ್ನು ಪಡೆಯಬೇಕು’ ಎಂದು ಸಂಘದ ಅಧ್ಯಕ್ಷ ವಿ.ರಾಮಸ್ವಾಮಿ ಹೇಳಿದರು.
2024- 25 ನೇ ಸಾಲಿನ ವಾರ್ಷಿಕ ಮಹಾಸಭೆಯ ನಡವಳಿಗಳು, ಲೆಕ್ಕಪರಿಶೋಧನಾ ವರದಿ, 2025- 26ನೇ ಸಾಲಿನ ಆಯವ್ಯಯ ಇನ್ನಿತರ ವಿಷಯಗಳನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೈಲಮೂರ್ತಿ ಜಿ. ಸಭೆಯಲ್ಲಿ ಮಂಡಿಸಿದರು.
ಹಿತಚಿಂತನಾ ಚಾರಿಟಬಲ್ ಟ್ರಸ್ಟ್ ಮತ್ತು ರಕ್ಷಾ ಚಾರಿಟಬಲ್ ಟ್ರಸ್ಟ್ ಹಾಗೂ ಅಕ್ಷಯ್ ಐ ಕೇರ್ ಸಹಭಾಗಿತ್ವದಲ್ಲಿ ಉಚಿತ ಕಣ್ಣು ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿತ್ತು. ಡಾ. ಮಂಜುನಾಥ್ ಮತ್ತು ಡಾ. ಟಿ.ಎಸ್.ಸ್ವಾಮಿ ರೋಗಿಗಳ ತಪಾಸಣೆ ನಡೆಸಿದರು.
ಸಂಘಕ್ಕೆ ಎರಡು ನಿವೇಶನ ದಾನ ನೀಡಿದಂತಹ ನಾಗರಾಜ್ ರಾವ್ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಎಸ್ಎಸ್ಎಲ್ ಮತ್ತು ಪಿಯುಸಿಯಲ್ಲಿ ಶೇಕಡ 85ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘದ ಉಪಾಧ್ಯಕ್ಷ ಜಿ. ಕೆಂಪರಾಜು, ಹಿತಚಿಂತನಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಪುಟ್ಟಮ್ಮ ವೆಂಕಟರಾಮಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಮಹಾನಂದ ಕುಂಬಾರ್ ಸಂಘದ ನಿರ್ದೇಶಕರಾದ ರಾಜಗೋಪಾಲ್, ಮಹಾದೇವಯ್ಯ, ಜಯಮ್ಮ, ಜಯಲಕ್ಷ್ಮಿ, ಗೋಪಾಲಕೃಷ್ಣ ಟಿ ಸಿ,ರಾಮಾಂಜನೇಯ, ಭಾಗ್ಯಮ್ಮ ನಾಗರತ್ನಮ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.