ಬೆಂಗಳೂರು: ‘ಗ್ರಂಥಾಲಯಕ್ಕೆ ಪುಸ್ತಕಗಳನ್ನು ಖರೀದಿಸುವುದು ಅತ್ಯಂತ ಅವಶ್ಯಕ. ಆದರೆ ಅದನ್ನು ಅರ್ಥಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೇ ಹೊರತು ಖರೀದಿ ಯೋಜನೆ ನಿಲ್ಲುವಂತಾಗಬಾರದು’ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿಯ ಅಧ್ಯಕ್ಷ ಕರೀಗೌಡ ಬೀಚನಹಳ್ಳಿ ಅಭಿಪ್ರಾಯಪಟ್ಟರು.
ನಗರದಲ್ಲಿ ಬಹುರೂಪಿ ಪ್ರಕಾಶನ ಹಮ್ಮಿಕೊಂಡಿದ್ದ ಪ್ರಕಾಶನ ರಂಗದ ಬಗೆಗಿನ ಒಂದು ದಿನದ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.
‘ಗ್ರಂಥಾಲಯ ಇಲಾಖೆಯಲ್ಲಿನ ಪುಸ್ತಕಗಳ ಖರೀದಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರ ವಿರುದ್ಧ ಸೂಕ್ತ ಕ್ರಮ ಖಂಡಿತ ಅಗತ್ಯ’ . ಪುಸ್ತಕ ಲೋಕದಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ತಡೆಯುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಉತ್ತಮ ಅಭಿರುಚಿಯ ಪ್ರಕಾಶಕರ ಸಂಖ್ಯೆ ಹೆಚ್ಚುತ್ತಾ ಹೋದಷ್ಟೂ ಪ್ರಕಾಶನ ರಂಗ ವ್ಯವಸಾಯಿ ರೂಪ ಪಡೆದುಕೊಳ್ಳುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಗಾಂಧಿ ಸ್ಮಾರಕ ನಿಧಿಯ ಎಚ್.ಬಿ ದಿನೇಶ್, ‘ಬಹುಮಾಧ್ಯಮದ ಈ ಕಾಲದಲ್ಲಿ ಪುಸ್ತಕ ಪ್ರೀತಿ ನಿರಂತರವಾಗಿ ಇರುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.
ಕಾರ್ಯಾಗಾರದಲ್ಲಿ ಆಂಧ್ರ ಪ್ರದೇಶ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ಕಟ್ಟಿಮನಿ, ಕಲಾವಿದ ಗುಜ್ಜಾರ್, ಮಕ್ಕಳ ಪುಸ್ತಕ ಪರಿಚಾರಕರಾದ ಲಕ್ಷ್ಮಿ ಕರುಣಾಕರನ್, ವಿವೇಕ್ ಬಿ.ಜಿ, ಹೇಮಾ ಖುರ್ಸಾಪೂರ ಅವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.