ADVERTISEMENT

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಪ್ರೀಮಿಯಂ ಪಿಕ್ ಅಪ್ ವಲಯ; 10 ನಿಮಿಷಕ್ಕೆ ₹ 275

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್‌–1ರಲ್ಲಿ ಪರಿಚಯ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 21:01 IST
Last Updated 31 ಡಿಸೆಂಬರ್ 2025, 21:01 IST
<div class="paragraphs"><p>ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ</p></div>

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಪ್ರತಿಷ್ಠಿತ ಪಿಕ್‌ ಅಪ್‌ ವಲಯ’ (ಪ್ರೀಮಿಯಂ ಪಿಕ್‌ ಅಪ್‌ ವಲಯ) ಪರಿಚಯಿಸಲಾಗಿದೆ. ವಾಣಿಜ್ಯ ಸಂಚಾರಕ್ಕೆ ಮೀಸಲಾದ ವಾಹನಗಳಿಗೆ (ಹಳದಿ ನಂಬರ್‌ ಪ್ಲೇಟ್‌) 10 ನಿಮಿಷಕ್ಕ ₹275 ಆ ನಂತರದ ಹೆಚ್ಚುವರಿ ಐದು ನಿಮಿಷಕ್ಕೆ ₹150 ಶುಲ್ಕ ನಿಗದಿ ಮಾಡಲಾಗಿದೆ.

ಹೊಸ ವಲಯವನ್ನು ಭಾನುವಾರ ಆರಂಭಿಸಲಾಗಿದೆ. ಪ್ರವೇಶ ದ್ವಾರಗಳ ಬಳಿ ಐದನೇ ಲೇನ್‌ನಲ್ಲಿ ಹೊಸ ಪಿಕ್‌ ಅಪ್ ವಲಯ ಸ್ಥಾಪಿಸಲಾಗಿದೆ. ಇದರಲ್ಲಿ ಚಾಲಕ 15 ನಿಮಿಷ ಕಳೆದರೆ, ಅವರಿಗೆ ₹425 ಶುಲ್ಕ ವಿಧಿಸಲಾಗುತ್ತದೆ. ಪಿ3 ಮತ್ತು ಪಿ4ರಲ್ಲಿ ಗೊತ್ತುಪಡಿಸಿದ ಪಾರ್ಕಿಂಗ್ ಸ್ಥಳದ ಕಡೆಗೆ ನಡೆಯುವ ಬದಲು ಕರ್ಬ್-ಸೈಡ್ ಪಿಕ್‌ ಅಪ್‌ ಅನ್ನು ಆದ್ಯತೆ ನೀಡುವ ಪ್ರಯಾಣಿಕರಿಗಾಗಿ ನಿಗದಿಪಡಿಸಲಾಗಿದೆ. 

ADVERTISEMENT

15 ನಿಮಿಷಗಳಿಗಿಂತ ಹೆಚ್ಚು ಕಾಲ ಇಲ್ಲಿ ಪಾರ್ಕಿಂಗ್‌ ಮಾಡಿದರೆ ವಾಹನ ಮಾಲೀಕರಿಂದ ಹೆಚ್ಚುವರಿ ವೆಚ್ಚ ವಸೂಲಿ ಮಾಡುವುದಲ್ಲದೇ ಆ ವಾಹನವನ್ನು ಪೊಲೀಸ್‌ ವಶಕ್ಕೆ ನೀಡಲಾಗುತ್ತದೆ ಎಂದು ಇಲ್ಲಿ ಫಲಕ ಹಾಕಲಾಗಿದೆ. 

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್‌) ಕಾರ್ಪೊರೇಟ್ ಟ್ಯಾಕ್ಸಿಗಳಿಗೆ ಪಿಕ್‌ ಅಪ್‌ ಶುಲ್ಕವನ್ನು ₹275 ವಿಧಿಸುವುದಾಗಿ ಡಿ.26ರಂದು ಘೋಷಿಸಿತ್ತು. ಬಳಿಕ ಈ ನಿರ್ಧಾರದಿಂದ ಹಿಂದಕ್ಕೆ ಸರಿದಿತ್ತು. ಎರಡೇ ದಿನ ಬಿಟ್ಟು ಡಿ. 28ರಂದು ಸದ್ದಿಲ್ಲದೇ ಹೊಸ ಲೇನ್‌ ವ್ಯವಸ್ಥೆ ಜಾರಿಗೆ ತಂದಿದೆ. ಈ ನಿರ್ಧಾರದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದೂ ಬಿಐಎಎಲ್‌ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ವಿರೋಧ: ಬಿಐಎಎಲ್ ನಿರ್ಧಾರಕ್ಕೆ ಕ್ಯಾಬ್‌ ಚಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಪ್ರೀಮಿಯಂ ಪಿಕ್‌ ಅಪ್‌ ವಲಯವನ್ನು ಪ್ರವೇಶಿಸಲು ನಮಗೆ ಸಾಧ್ಯವಿಲ್ಲ. ಇಷ್ಟೊಂದು ದುಬಾರಿ ಶುಲ್ಕವನ್ನು ಭರಿಸುವುದು ಕಷ್ಟ. ಈಗಾಗಲೇ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿ ನಮ್ಮ ಜೀವನೋಪಾಯಕ್ಕೆ ಹೊಡೆತ ಬಿದ್ದಿದೆ. ಈಗ ಪ್ರೀಮಿಯಂ ಪಿಕ್‌ ಅಪ್‌ ವಲಯವು ಗಾಯದ ಮೇಲೆ ಬರೆ ಎಳೆದಿದೆ’ ಎಂದು ಕ್ಯಾಬ್ ಚಾಲಕ ರಹೀಮ್ ತಿಳಿಸಿದರು.

ಹೊಸ ಶುಲ್ಕ ನಿಯಮ ವಿಧಿಸಿರುವ ವಿಮಾನ ನಿಲ್ದಾಣ ಅಧಿಕಾರಿಗಳ ವಿರುದ್ಧ ಹಲವಾರು ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಹೊಸ ಪಿಕ್‌ ಅಪ್‌ ನಿಯಮಗಳನ್ನು ಹಿಂಪಡೆಯುವಂತೆ ಕೋರಿ ಸಲ್ಲಿಸಲಾದ ಆನ್‌ಲೈನ್ ಅರ್ಜಿಗೆ ಇದುವರೆಗೆ 1,572 ಜನರು ಸಹಿ ಹಾಕಿದ್ದಾರೆ.

‘ದೇಶದ ಅತ್ಯಂತ ಪ್ರಸಿದ್ಧ ವಿಮಾನ ನಿಲ್ದಾಣಗಳಲ್ಲಿ ಒಂದಾದ ಕೆಂ‍ಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಿಯಾದ ಅಧ್ಯಯನ ಇಲ್ಲದೇ ಇಂತಹ ನಿಯಮಗಳನ್ನು ಅವೈಜ್ಞಾನಿಕವಾಗಿ ತರುತ್ತಿರುವುದು ಆಶ್ಚರ್ಯವನ್ನು ಉಂಟು ಮಾಡಿದೆ’ ಎಂದು ಆನ್‌ಲೈನ್‌ ಸಹಿ ಸಂಗ್ರಹ ಅಭಿಯಾನ ಆರಂಭಿಸಿರುವ ಹರೀಶ್ ಅಮ್ಜುರಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.