ADVERTISEMENT

₹150 ಕೋಟಿ ವೆಚ್ಚದಲ್ಲಿ ಬೆಂಗಳೂರು ಕೇಂದ್ರ ವಿವಿ ಅಭಿವೃದ್ಧಿ: ಡಾ. ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 27 ಮೇ 2020, 14:41 IST
Last Updated 27 ಮೇ 2020, 14:41 IST
   

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವನ್ನು ₹150 ಕೋಟಿ ವೆಚ್ಚದಲ್ಲಿ ವಿಶ್ವದರ್ಜೆಯ ಕ್ಯಾಂಪಸ್‌ ಆಗಿ ಅಭಿವೃದ್ಧಿಪಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಅಭಿವೃದ್ಧಿ ಕುರಿತ ಪರಿಶೀಲನಾ ಸಭೆಯಲ್ಲಿ ಬುಧವಾರ ಪಾಲ್ಗೊಂಡ ನಂತರ ಅವರು ಮಾತನಾಡಿದರು.

ಕುಲಪತಿ ಪ್ರೊ. ಎಸ್‌. ಜಾಫೆಟ್ ನೇತೃತ್ವದ ತಂಡ ಪ್ರಸ್ತುತ ಪಡಿಸಿದ ಬೆಂಗಳೂರು ಸೆಂಟ್ರಲ್‌ ವಿವಿಯ ಅಭಿವೃದ್ಧಿ ಕಾರ್ಯಗಳ ಕುರಿತ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ವಿಶ್ವದರ್ಜೆಯ ಕ್ಯಾಂಪಸ್‌ ನಿರ್ಮಾಣದ ಕುರಿತು ಹಲವಾರು ಸಲಹೆಗಳನ್ನು ನೀಡಿದರು.

ADVERTISEMENT

'ಆದಷ್ಟು ಬೇಗ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗುವುದು. 31 ಎಕರೆ ಜಾಗ ಇದ್ದು, ಅಲ್ಲಿ ಶೈಕ್ಷಣಿಕ ಹಾಗೂ ಕ್ರೀಡಾ ಸಮುಚ್ಚಯಗಳ ನಿರ್ಮಾಣ ಮಾಡಲಾಗುವುದು. ಮೊದಲ ಹಂತದಲ್ಲಿ ಅಭಿವೃದ್ಧಿ ಪಡಿಸಲಾಗುವ ಶೈಕ್ಷಣಿಕ ಘಟಕ, ಐತಿಹಾಸಿಕ ಕಟ್ಟಡಗಳ ನವೀಕರಣಕ್ಕೆ ₹100 ಕೋಟಿ ಹಾಗೂ ಕ್ರೀಡಾ ಸೌಲಭ್ಯಕ್ಕೆ ₹50 ಕೋಟಿ ಮೀಸಲಿಡಲಾಗುವುದು. 18 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಲು ಸೂಚಿಸಲಾಗಿದೆ' ಎಂದು ಅವರು ತಿಳಿಸಿದರು.

'ಸದ್ಯ ವಿಶ್ವವಿದ್ಯಾಲಯದಲ್ಲಿ 800 ವಿದ್ಯಾರ್ಥಿಗಳಿದ್ದು, ಹಲವು ಹೊಸ ಕೋರ್ಸ್‌ಗಳನ್ನು ಆರಂಭಿಸಲಾಗುವುದು. ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಒಳಗೊಂಡ ಇಂಟಿಗ್ರೇಟೆಡ್‌ ಕೋರ್ಸ್‌ಗಳನ್ನು ಪರಿಚಯಿಸಲಾಗುವುದು. ಒಟ್ಟು 50,000 ವಿದ್ಯಾರ್ಥಿಗಳು ಓದಲು ಅನುಕೂಲವಾಗುವಂಥ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದೇನೆ' ಎಂದು ಹೇಳಿದರು.

ಕ್ರೀಡಾ ಸೌಕರ್ಯ

'ಶಿಕ್ಷಣದಷ್ಟೇ ಕ್ರೀಡೆಗೂ ವಿಶ್ವವಿದ್ಯಾಲಯದಲ್ಲಿ ಒತ್ತು ನೀಡಲಾಗುವುದು. ಅದಕ್ಕಾಗಿಯೇ ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕ ಕ್ರೀಡಾ ಘಟಕ ನಿರ್ಮಿಸಿ ಅಲ್ಲಿ ಮಲ್ಟಿ ಗೇಮ್‌ ಕ್ರೀಡಾಂಗಣದ ಸೌಕರ್ಯ ಒದಗಿಸಲಾಗುವುದು. 400 ಮೀಟರ್‌ ಟ್ರ್ಯಾಕ್‌ ಸಹ ಅಲ್ಲಿರಲಿದೆ. ಜತೆಗೆ, ಕ್ಯಾಂಪಸ್‌ ಸುತ್ತ ವಾಕಿಂಗ್ ಪಾತ್‌ ನಿರ್ಮಿಸಲಾಗುವುದು' ಎಂದು ವಿವರಿಸಿದರು.

ಪರಿಸರ ಸ್ನೇಹಿ

ವಿಶ್ವವಿದ್ಯಾಲಯವನ್ನು ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗುವುದು. ಮಳೆ ನೀರು ಸಂಗ್ರಹಕ್ಕೆ 4-5 ಲಕ್ಷ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ನಿರ್ಮಿಸಲಾಗುವುದು. ನೀರನ್ನು ಶೇಕಡ 100ರಷ್ಟು ಪುನರ್‌ಬಳಕೆ ಮಾಡಲಾಗುವುದು. ಜತೆಗೆ, 125 ಕಿ.ಲೋ ವ್ಯಾಟ್‌ ಸಾಮರ್ಥ್ಯದ ಸೌರ ಶಕ್ತಿ ಉತ್ಪಾದನಾ ಘಟಕ ಸ್ಥಾಪಿಸಲಾಗುವುದು. ಕ್ಯಾಂಪಸ್‌ ಮಧ್ಯ ಹಸಿರು ವಾತಾವರಣ ಸೃಷ್ಟಿಸಿ, ವಿದ್ಯಾರ್ಥಿಗಳು ಅಲ್ಲೇ ಕುಳಿತು ಅಧ್ಯಯನ ನಡೆಸಲು ಅನುಕೂಲ ಮಾಡಿಕೊಡಲಾಗುವುದು ಎಂದರು.

ಇ-ಆಡಳಿತಕ್ಕೆ ಒತ್ತು

ವಿಶ್ವವಿದ್ಯಾಲಯದ ಆಡಳಿತ ಪಾರದರ್ಶಕವಾಗಿಸುವ ನಿಟ್ಟಿನಲ್ಲಿ ಎಲ್ಲವೂ ಆನ್‌ಲೈನ್‌ನಲ್ಲಿರಬೇಕು. ಸರ್ಕಾರದ ಜತೆಗೆ ಆನ್‌ಲೈನ್‌ನಲ್ಲೇ ವ್ಯವಹರಿಸಲು ಸೂಚಿಸಲಾಗಿದೆ. ಈಗಿನಿಂದಲೇ ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬೋಧನಾ ವಿಧಾನವನ್ನೂ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.