ಬೆಂಗಳೂರು: ‘ನಮ್ಮ ಮೆಟ್ರೊ’, ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿಯಿಂದ ನಗರದ ಹಲವು ಕಡೆ ನಡೆಯುತ್ತಿರುವ ಕಾಮಗಾರಿಗಳು ಆಮೆವೇಗದಲ್ಲಿ ಸಾಗುತ್ತಿದ್ದು, ವಾಹನ ಸಂಚಾರ ದುಸ್ತರವಾಗಿದೆ.
ಇನ್ನೂ ಕೆಲವು ಕಾಮಗಾರಿಗಳಿಗೆ ಗ್ರಹಣ ಹಿಡಿದಿದೆ. ಕಾಮಗಾರಿ ವಿಳಂಬದಿಂದ ಅಪಘಾತಗಳು ಸಂಭವಿಸಿ ಸಾವು– ನೋವಿಗೂ ಕಾರಣವಾಗುತ್ತಿವೆ. ದಟ್ಟಣೆಯ ಜತೆಗೆ ಧಗೆ ಹಾಗೂ ದೂಳಿನ ಸಮಸ್ಯೆಯಿಂದ ಪ್ರಯಾಣಿಕರು ಹಾಗೂ ಚಾಲಕರು ಹೈರಾಣಾಗುತ್ತಿದ್ದಾರೆ.
ವಾಹನಗಳ ಸುಗಮ ಸಂಚಾರಕ್ಕೆ ಸಂಚಾರ ಪೊಲೀಸರು ಕ್ರಮ ಕೈಗೊಂಡಿದ್ದರೂ ವಿಳಂಬ ಕಾಮಗಾರಿಯಿಂದ ದಿನದಿಂದ ದಿನಕ್ಕೆ ಸಮಸ್ಯೆ ತೀವ್ರಗೊಳ್ಳುತ್ತಿದೆ. ಅಲ್ಲಲ್ಲಿ ಅವೈಜ್ಞಾನಿಕವಾಗಿ ಗುಂಡಿ ತೆಗೆದು ಮಣ್ಣಿನ ರಾಶಿ ಹಾಕಲಾಗಿದ್ದು, ವಾಹನಗಳು ಗುಂಡಿಯಲ್ಲಿ ಸಿಲುಕಿಕೊಳ್ಳುವುದು ಸಾಮಾನ್ಯವಾಗಿದೆ.
‘ನಮ್ಮ ಮೆಟ್ರೊ’ ಕಾಮಗಾರಿಗಾಗಿ ರಸ್ತೆಯ ಮಧ್ಯೆಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಮಣ್ಣು ತೆಗೆದು ಬ್ಯಾರಿಕೇಡ್ ಅಳವಡಿಸಲಾಗಿದೆ. ಇನ್ನು ಜಲಮಂಡಳಿಯಿಂದ ಅಳವಡಿಸಿರುವ ಪೈಪ್ಗಳು ಅಲ್ಲಲ್ಲಿ ಒಡೆದು ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಪೈಪ್ ಬದಲಾವಣೆಗಾಗಿ ರಸ್ತೆಯ ಮಧ್ಯ ಭಾಗದಲ್ಲಿ ಅಗೆಯಲಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಕಾಮಗಾರಿಯ ವಿಳಂಬ ಹಾಗೂ ಗುಂಡಿ ಬಿದ್ದಿರುವ ರಸ್ತೆಗಳಿಂದ ನಿತ್ಯವೂ ಅಪಘಾತಗಳು ಸಂಭವಿಸುತ್ತಿವೆ.
ಫೇಸ್ಬುಕ್ ಹಾಗೂ ‘ಎಕ್ಸ್’ ಖಾತೆಯಲ್ಲಿ ಸಂಚಾರ ಪೊಲೀಸರು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಮಾಹಿತಿ ನೀಡಿದ್ದರೂ, ಗೊತ್ತಿಲ್ಲದೇ ಬಂದವರು ಸಮಸ್ಯೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಬಿಬಿಎಂಪಿ ನಡೆಸುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯೂ ನಿಧಾನವಾಗಿ ಸಾಗುತ್ತಿದ್ದು, ಹಲವು ಕಡೆ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.
‘ರಸ್ತೆ ಸಂಚಾರ ಬಂದ್ ಆಗಿರುವ ಮಾಹಿತಿಯನ್ನು ಬೀಟ್ ಪೊಲೀಸರು ತಕ್ಷಣವೇ ಕಂಟ್ರೋಲ್ ರೂಂಗೆ ನೀಡುತ್ತಾರೆ. ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕುತ್ತೇವೆ. ಸಾಮಾಜಿಕ ಮಾಧ್ಯಮ ಬಳಸದವರು ಬಂದ್ ಆಗಿರುವ ರಸ್ತೆಯಲ್ಲೇ ಸಾಗಿ ಸಮಸ್ಯೆಗೆ ಸಿಲುಕುತ್ತಿದ್ದಾರೆ’ ಎಂದು ಸಂಚಾರ ಪೊಲೀಸ್ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.
ಎಲ್ಲೆಲ್ಲಿ ಸಮಸ್ಯೆ?: ಮಹದೇವಪುರ ವಾರ್ಡ್ನ ಕಾರ್ತಿಕ್ ನಗರದ ಕಲಾಮಂದಿರದ ಬಳಿ ನಡೆಯುತ್ತಿರುವ ಮೆಟ್ರೊ ಕಾಮಗಾರಿಯಿಂದ ಕಾರ್ತಿಕ್ ನಗರ ಹಾಗೂ ಮಾರತ್ಹಳ್ಳಿಯ ಕಡೆಗೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸ್ಥಳದಲ್ಲಿ ಸಿಮೆಂಟ್, ಕಬ್ಬಿಣದ ಸರಳು ಹಾಕಲಾಗಿದ್ದು, ಜನರು ರಸ್ತೆ ದಾಟುವುದಕ್ಕೂ ಪರದಾಡುತ್ತಿದ್ದಾರೆ ಎಂದು ಸ್ಥಳೀಯರು ನೋವು ತೋಡಿಕೊಂಡಿದ್ದಾರೆ.
ಹೊರ ವರ್ತುಲ ರಸ್ತೆಯ ರೈಲ್ವೆ ಸೇತುವೆ ಬಳಿ ನಡೆಯುತ್ತಿರುವ ಕಾಮಗಾರಿಯಿಂದ ಮಹದೇವಪುರದಿಂದ ಮಾರತ್ಹಳ್ಳಿ ಕಡೆಗೆ ಹಾಗೂ ಮಾರತ್ಹಳ್ಳಿಯಿಂದ ಮಹದೇವಪುರದ ಕಡೆಗೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಸಮಸ್ಯೆ ತೀವ್ರವಾಗಿದೆ. ಈ ಸ್ಥಳಗಳಲ್ಲಿ ಅಪಘಾತಗಳೂ ಸಂಭವಿಸುತ್ತಿವೆ ಎಂದು ಆಟೊ ಚಾಲಕ ಚಂದ್ರು ನೋವು ತೋಡಿಕೊಂಡಿದ್ದಾರೆ.
ಸಕ್ರಾ ಆಸ್ಪತ್ರೆಯ ರಸ್ತೆಯಲ್ಲಿ ಜಲಮಂಡಳಿ ಹಾಗೂ ಬಿಬಿಎಂಪಿಯಿಂದ ನಡೆಯುತ್ತಿರುವ ಕಾಮಗಾರಿಗೆ ವೇಗ ಸಿಕ್ಕಿಲ್ಲ. ಇದರಿಂದ ಬೆಳ್ಳಂದೂರು ಕೋಡಿಯಿಂದ ಸಕ್ರಾ ಆಸ್ಪತ್ರೆಯ ಕಡೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಜಲಮಂಡಳಿಯ ಅಳವಡಿಸಿದ್ದ ಪೈಪ್ಗಳು ಆಗಾಗ್ಗೆ ಒಡೆದು ನೀರು ಸೋರಿಕೆ ಆಗುತ್ತಿದ್ದು, ಸೆಂಟ್ರಲ್ ಜೈಲು ರಸ್ತೆಯಿಂದ ರಾಯ್ ಸಂದ್ರಾ ಜಂಕ್ಷನ್ ಕಡೆಗೆ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೆಲವು ರಸ್ತೆಗಳಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಚಾಲನೆ ಮಾಡುವುದಕ್ಕೇ ಭಯವಾಗುತ್ತದೆ. ಬೀದಿ ದೀಪಗಳು ಉರಿಯದೇ ಕತ್ತಲು ಆವರಿಸಿದ್ದ ರಸ್ತೆಯಲ್ಲಿ ಚಲಿಸಿದರೆ ಅಪಘಾತ ಆಗುವುದು ಖಚಿತಸುರೇಶ್ ಟೆಕಿ, ಎಚ್.ಎಸ್.ಆರ್ ಲೇಔಟ್
ವೈಟ್ ಟಾಪಿಂಗ್ ಬವಣೆ
ಕಳೆದ ನವೆಂಬರ್ನಿಂದ ಜೆ.ಸಿ.ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ನಾಲಾ ಜಂಕ್ಷನ್ನಿಂದ ಪುರಭವನದ ವರೆಗೆ ನಡೆಯುತ್ತಿರುವ ಕಾಮಗಾರಿಯು ಕುಂಟುತ್ತಾ ಸಾಗುತ್ತಿದೆ. ಇದರಿಂದ ವಾಹನಗಳು ಪರ್ಯಾಯ ಮಾರ್ಗದಲ್ಲಿ ಚಲಿಸುತ್ತಿದ್ದು ಆ ಮಾರ್ಗದಲ್ಲಿ ಬೆಳಿಗ್ಗೆ ಹಾಗೂ ಸಂಜೆ ವಾಹನಗಳು ದಟ್ಟಣೆಯಲ್ಲಿ ಸಿಲುಕಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಎಸ್ಬಿಆರ್ ಪ್ಯಾಲೆಸ್ ಕಡೆಯಿಂದ ತುಳಸಿ ಚಿತ್ರಮಂದಿರ ಕಡೆಗೆ ಸಾಗುವ ದಾರಿಯಲ್ಲಿ ಮಣ್ಣು ಅಗೆದು ರಾಶಿ ಹಾಕಲಾಗಿದೆ. ಅಗರ ಜಂಕ್ಷನ್ನಲ್ಲಿ ಜಲಮಂಡಳಿ ನಡೆಸುತ್ತಿರುವ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಗುತ್ತಿಗೆದಾರರು ಕಾಮಗಾರಿಗೆ ವೇಗ ನೀಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.