ADVERTISEMENT

ವೈರಾಣು ಇಲ್ಲದಿದ್ದರೆ ಮನುಕುಲಕ್ಕೂ ಉಳಿಗಾಲವಿಲ್ಲ: ಪ್ರಣಯ್‌ ಲಾಲ್

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 20:57 IST
Last Updated 18 ಡಿಸೆಂಬರ್ 2021, 20:57 IST
ಪುಸ್ತಕದಲ್ಲಿ ಚಿತ್ತಾರ ಬಿಡಿಸಿ ಹಸ್ತಾಕ್ಷರ ನೀಡುವುದರಲ್ಲಿ ತಲ್ಲೀನರಾಗಿರುವ ಪ್ರಣಯ್‌ ಲಾಲ್‌– ಪ್ರಜಾವಾಣಿ ಚಿತ್ರ
ಪುಸ್ತಕದಲ್ಲಿ ಚಿತ್ತಾರ ಬಿಡಿಸಿ ಹಸ್ತಾಕ್ಷರ ನೀಡುವುದರಲ್ಲಿ ತಲ್ಲೀನರಾಗಿರುವ ಪ್ರಣಯ್‌ ಲಾಲ್‌– ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೊರೊನಾ ವೈರಾಣು ಸೋಂಕು ಕಾಣಿಸಿಕೊಂಡ ಬಳಿಕ ಸೃಷ್ಟಿಯಾದ ಬಿಕ್ಕಟ್ಟುಗಳು, ಅದರ ರೂಪಾಂತರ ತಳಿ ಓಮೈಕ್ರಾನ್‌ ಹರಡುವಿಕೆಯಿಂದ ಎದುರಾಗಿರುವ ತಲ್ಲಣಗಳಿಂದಾಗಿ ವೈರಸ್‌ಗಳನ್ನು ಹಲುಬುವವರ ಸಂಖ್ಯೆ ಜಾಸ್ತಿ ಆಗಿರಬಹುದು. ಆದರೆ, ಭೂಮಿಯಲ್ಲಿ ವೈರಸ್‌ಗಳೇ ಇಲ್ಲವಾಗಿಬಿಟ್ಟರೆ ಮನುಕುಲವೂ ಉಳಿಯುವುದಿಲ್ಲ ಎನ್ನುತ್ತಾರೆ ವಿಜ್ಞಾನ ಲೇಖಕ ಪ್ರಣಯ್‌ ಲಾಲ್‌.

ಲೇಖಕ ಪ್ರಣಯ್‌ ಲಾಲ್‌ ತಮ್ಮ ‘ಇನ್‌ವಿಸಿಬಲ್‌ ಎಂಪೈರ್: ಎ ನ್ಯಾಚುರಲ್‌ ಹಿಸ್ಟರಿ ಆಫ್‌ ವೈರಸಸ್‌’ ಕೃತಿಯ ಕುರಿತು ರಾಹುಲ್‌ ಮಥಾನ್‌ ಜೊತೆ ನಡೆಸಿದ ಚರ್ಚೆಯಲ್ಲಿ ವೈರಸ್‌ಗಳ ಮಹತ್ವ ಹಾಗೂ ಅವುಗಳ ನಿಗೂಢ ಜಗತ್ತಿನ ರೋಚಕ ಸಂಗತಿಗಳನ್ನು ತೆರೆದಿಟ್ಟರು.

‘ವೈರಸ್‌, ಬ್ಯಾಕ್ಟೀರಿಯಾ ಸೇರಿದಂತೆ 1.3 ಲಕ್ಷ ಕೋಟಿ ಸೂಕ್ಷ್ಮಾಣುಜೀವಿಗಳು ಮನುಷ್ಯನ ದೇಹದಲ್ಲಿರುತ್ತವೆ. ಅವುಗಳಿಂದ ಸೃಷ್ಟಿಯಾಗಿರುವ ಮೈಕ್ರೊ ಬಯೋಮ್‌ಗಳೂ ನಮ್ಮದೇಹದ ಕಾರ್ಯನಿರ್ವಹಣೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ. ಭೂಮಿಯ ಹುಟ್ಟು ಮತ್ತು ಜೀವವಿಕಾಸದ ಹಾದಿಯಲ್ಲೂ ಅವುಗಳ ಪಾತ್ರ ಮಹತ್ತರವಾದುದು’ ಎಂದರು.

ADVERTISEMENT

‘ಜೀವ ಸಂಕುಲಗಳು ಎದುರಿಸುವ ಎಲ್ಲ ಸಮಸ್ಯೆಗಳಿಗೂ ನಿಸರ್ಗದಲ್ಲೇ ಪರಿಹಾರವೂ ಇದೆ. ವೈರಾಣು ಸೋಂಕುಗಳನ್ನು ಎದುರಿಸಲು ಅಗತ್ಯವಿರುವ ಪ್ರತಿರೋಧ ಶಕ್ತಿಯು ನಮ್ಮ ದೇಹದಲ್ಲಿ ಸ್ವಾಭಾವಿಕವಾಗಿ ಬೆಳವಣಿಗೆ ಹೊಂದಿದರೆ ಒಳ್ಳೆಯದು’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.