
ಬೆಂಗಳೂರು: ಕೆಲಸ ಸಿಕ್ಕಿಲ್ಲವೆಂದು ಕಳ್ಳತನಕ್ಕಿಳಿದಿದ್ದ ಪದವೀಧರನನ್ನು ಮೈಕೊ ಲೇಔಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರಿನ ಗೋವರ್ಧನ್ ಬಂಧಿತ.
ಆರೋಪಿಯಿಂದ 21 ಲ್ಯಾಪ್ಟಾಪ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
‘ಕೆಲಸ ಹುಡುಕಿಕೊಂಡು ನಾಲ್ಕು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿ, ಸ್ನೇಹಿತನ ಜತೆಗೆ ಪೇಯಿಂಗ್ ಗೆಸ್ಟ್ನಲ್ಲಿ ನೆಲಸಿದ್ದ. ಬಿ.ಎ ಪದವಿ ಪಡೆದಿದ್ದ ಆರೋಪಿ, ನಗರದ ವಿವಿಧೆಡೆ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದ. ಉತ್ತಮ ಕೆಲಸ ದೊರೆಯದೇ ನಿರಾಶೆಗೊಂಡಿದ್ದ ಆತ, ಸ್ನೇಹಿತನ ಲ್ಯಾಪ್ಟಾಪ್ ಕಳ್ಳತನ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದ. ನಂತರ, ಇದನ್ನೇ ರೂಢಿಸಿಕೊಂಡಿದ್ದ ಆರೋಪಿ ವಿವಿಧ ಪಿ.ಜಿಗಳನ್ನು ಗುರಿಯಾಗಿಸಿಕೊಂಡು ಲ್ಯಾಪ್ಟಾಪ್ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ಮೈಕೊ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ವೇಳೆ ಆರೋಪಿಯ ಬಂಧನವಾಗಿದ್ದು, 21 ಲ್ಯಾಪ್ಟಾಪ್ಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.