
ಹಣ ತುಂಬಿದ್ದ ಸಿಎಂಎಸ್ ಏಜೆನ್ಸಿ ವಾಹನ ಮತ್ತು ದರೋಡೆಕೋರರು ಬಳಸಿದ್ದ ಇನೊವಾ ಕಾರು
ಬೆಂಗಳೂರು: ಎಟಿಎಂ ಕೇಂದ್ರಕ್ಕೆ ಹಣ ತುಂಬಲು ಹೊರಟಿದ್ದ ಸಿಎಂಎಸ್ ಏಜೆನ್ಸಿ ವಾಹನವನ್ನು ಆದಾಯ ತೆರಿಗೆ ಇಲಾಖೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿ, ₹7.11 ಕೋಟಿ ದರೋಡೆ ನಡೆಸಿದ ಆರೋಪಿಗಳು ಪರಾರಿಯಾಗಿರುವ ಘಟನೆ ಬುಧವಾರ ಮಧ್ಯಾಹ್ನ 12ರಿಂದ 1 ಗಂಟೆಯ ನಡುವೆ ನಗರದಲ್ಲಿ ನಡೆದಿದೆ.
ಕೃತ್ಯದ ಬಳಿಕ ದರೋಡೆಕೋರರು ಹೋಗಿದ್ದೆಲ್ಲಿಗೆ?
ಕೃತ್ಯ ಎಸಗಿದ ಬಳಿಕ ದರೋಡೆಕೋರರು ಹೊಸಕೋಟೆ ಕಡೆ ತೆರಳಿರುವ ಮಾಹಿತಿ ಸಿಕ್ಕಿದೆ. ಡೇರಿ ವೃತ್ತ, ಕೋರಮಂಗಲ, ದೊಮ್ಮಲೂರು, ಮಾರತ್ಹಳ್ಳಿ, ವೈಟ್ ಫೀಲ್ಡ್ ಮಾರ್ಗವಾಗಿ ಹೊಸಕೋಟೆ ಕಡೆ ತೆರಳಿರುವ ಮಾಹಿತಿ ಲಭ್ಯವಾಗಿದೆ. ದರೋಡೆಕೋರರಿದ್ದ ಕಾರು ಸಾಗುತ್ತಿರುವುದು ಟೋಲ್ನ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಿಎಂಎಸ್ ಏಜೆನ್ಸಿಯ ನಾಲ್ವರ ವಿಚಾರಣೆ
‘ಸಿಎಂಎಸ್ ಏಜೆನ್ಸಿಯ ವಾಹನದ ಚಾಲಕ ಬಿನೋದ್ ಕುಮಾರ್, ಭದ್ರತಾ ಸಿಬ್ಬಂದಿ ರಾಜಣ್ಣ ಹಾಗೂ ತಮ್ಮಯ್ಯ, ಎಟಿಎಂಗೆ ಹಣ ತುಂಬುವ ಸಿಬ್ಬಂದಿ ಅಫ್ತಾಬ್ ಇದ್ದರು. ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ನಾಲ್ವರ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಇವರ ಹೇಳಿಕೆಯಲ್ಲಿ ಕೆಲವು ಗೊಂದಲಗಳಿವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಯನಗರ, ಜೆ.ಪಿ. ನಗರ, ಸಿದ್ದಾಪುರ, ಸುದ್ದಗುಂಟೆಪಾಳ್ಯ ಠಾಣೆಯ ಪೊಲೀಸರ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.