
ಕಾರ್ಯಕ್ರಮದಲ್ಲಿ ಪಿ.ವೈ. ರಾಜೇಂದ್ರ ಕುಮಾರ್ ಮತ್ತು ಅವರ ಪತ್ನಿ ನಾಗವೇಣಿ ಅವರನ್ನು ಗೌರವಿಸಲಾಯಿತು. ಕೆ.ಇ. ರಾಧಾಕೃಷ್ಣ, ಬಸವರಾಜ ಎಸ್. ಹೊರಟ್ಟಿ, ಕರ್ನಾಟಕ ಜೈನ್ ಅಸೋಸಿಯೇಷನ್ನ ಅಧ್ಯಕ್ಷ ಎಸ್. ಜೀತೆಂದ್ರ ಕುಮಾರ್, ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ಹಂಪ ನಾಗರಾಜಯ್ಯ, ಸತೀಶ್ ಕುಮಾರ್ ಹೊಸಮನಿ ಉಪಸ್ಥಿತರಿದ್ದರು
-ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಲೇಖಕರಿಂದ 300 ಪುಸ್ತಕಗಳನ್ನು ಕರ್ನಾಟಕ ಗ್ರಂಥಾಲಯ ಇಲಾಖೆಯ ಮೂಲಕ ನಿರಂತರವಾಗಿ ಖರೀದಿ ಮಾಡಲು ಸರ್ಕಾರ ವ್ಯವಸ್ಥೆ ಮಾಡಬೇಕು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಗ್ರಂಥಾಲಯ ಇಲಾಖೆಯ ನಿವೃತ್ತ ನಿರ್ದೇಶಕ ಪಿ.ವೈ.ರಾಜೇಂದ್ರಕುಮಾರ್ ಅವರ ‘ಗ್ರಾಮೀಣ ಜ್ಞಾನ ಸಮುಚ್ಚಯಗಳು- ಒಂದು ಪರಿಕಲ್ಪನೆ’ ಪುಸ್ತಕ ಜನಾರ್ಪಣೆಗೊಳಿಸಿ ಮಾತನಾಡಿದರು.
‘2006-07ರಲ್ಲಿ ನಾನು ಗ್ರಂಥಾಲಯ ಇಲಾಖೆ ಸಚಿವನಾಗಿದ್ದಾಗ ಲೇಖಕರಿಂದ 300 ಕನ್ನಡ ಪುಸ್ತಕ ಖರೀದಿಸುವ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿತ್ತು. ಆಗ ನಿರ್ದೇಶಕರಾಗಿದ್ದ ರಾಜೇಂದ್ರಕುಮಾರ್ ಅವರು ಕಾರ್ಯಕ್ರಮ ಜಾರಿಗೆ ಬೆಂಬಲ ನೀಡಿದರು. ಇದರಿಂದ ಲೇಖಕರಿಗೂ ಹೆಚ್ಚಿನ ಪ್ರೋತ್ಸಾಹ ದೊರೆಯುವಂತಾಯಿತು. ಕೆಲ ವರ್ಷದಿಂದ ಪುಸ್ತಕ ಖರೀದಿ ಸಮರ್ಪಕವಾಗಿ ಆಗುತ್ತಿಲ್ಲ. ಸರ್ಕಾರದ ಹಂತದಲ್ಲಿ ಮಾತನಾಡಿ ಪುಸ್ತಕ ಖರೀದಿಗೆ ಸೂಚನೆ ನೀಡುತ್ತೇನೆ’ ಎಂದರು.
ಸಾಹಿತಿ ಹಂಪ ನಾಗರಾಜಯ್ಯ ಮಾತನಾಡಿ, ‘ರಾಜೇಂದ್ರಕುಮಾರ್ ಅವರ ಅವಧಿಯಲ್ಲಿ ಗ್ರಂಥಾಲಯ ಇಲಾಖೆ ನಿರ್ವಹಣೆ ಚೆನ್ನಾಗಿತ್ತು. ಜೈನ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳ ಪ್ರಕಟಣೆಗೆ ಪ್ರೋತ್ಸಾಹ ದೊರೆತಿತ್ತು’ ಎಂದು ತಿಳಿಸಿದರು.
ಲೇಖಕ ರಾಜೇಂದ್ರ ಕುಮಾರ್ ಮಾತನಾಡಿ, ‘ಗ್ರಂಥಾಲಯ ಇಲಾಖೆ ಮೂಲಕ ಜನರಿಗೆ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗಿದೆ. ತುಮಕೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಡಿಲಿಟ್ ಪದವಿ ಪ್ರಬಂಧವನ್ನು ಈಗ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದು, ಗ್ರಂಥಾಲಯದ ಮಹತ್ವವನ್ನು ಇದು ತಿಳಿಸಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.