ಬೆಂಗಳೂರು: ನಗರದ ಅಪಾರ್ಟ್ಮೆಂಟ್ಗಳಲ್ಲಿರುವ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಮನವಿ ಮಾಡಿದರು.
ಆಗಸ್ಟ್ 13ರಿಂದ 15ರವರೆಗೆ ಹಮ್ಮಿಕೊಂಡಿರುವ ‘ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ’ ಅಭಿಯಾನದ ಅಂಗವಾಗಿ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ನಡೆದ ವರ್ಚುವಲ್ ಸಭೆಯಲ್ಲಿ ಗುರುವಾರ ಅವರು ಮಾತನಾಡಿದರು.
ಅಪಾರ್ಟ್ಮೆಟ್ಗಳಲ್ಲಿ ನಡೆದ ಅಭಿಯಾನದ ಛಾಯಾಚಿತ್ರ ಹಾಗೂ ದೃಶ್ಯಾವಳಿಗಳನ್ನು ಸಂಗ್ರಹಿಸಿ ಅಂತರ್ಜಾಲ https://harghartiranga.com ನಲ್ಲಿ ಅಪ್ಲೋಡ್ ಮಾಡಲು ತಿಳಿಸಿದರು.
ಆಡಳಿತ ವಿಭಾಗದ ವಿಶೇಷ ಆಯುಕ್ತ ರಂಗಪ್ಪ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯ ಪ್ರತಿಯೊಂದು ಮನೆಯಲ್ಲೂ ರಾಷ್ಟ್ರ ಧ್ವಜವನ್ನು ಹಾರಿಸಬೇಕು. ಅದರಂತೆ ಇದುವರೆಗೆ 10 ಲಕ್ಷ ಧ್ವಜಗಳನ್ನು ವಿತರಿಸಿದ್ದು, ಇನ್ನೂ 5 ಲಕ್ಷ ಧ್ವಜಗಳನ್ನು ವಿತರಣೆ ಮಾಡಲಾಗುತ್ತಿದೆ. ಆಯಾ ವಲಯ ಜಂಟಿ ಆಯುಕ್ತರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳನ್ನು ಸಂಪರ್ಕಿಸಿ ಧ್ವಜಗಳನ್ನು ಮಾರಾಟ ಮಾಡಲು ತಿಳಿಸಿದರು.
‘ಈ ಬಾರಿ ರಾಷ್ಟ್ರಧ್ವಜವನ್ನು ಆ.12ರಿಂದ 15ರವರೆಗೆ ಹಗಲುರಾತ್ರಿ ಹಾರಿಸಬಹುದು. ಅಮೃತ ಮಹೋತ್ಸವದ ಅಂಗವಾಗಿ ವಿನಾಯಿತಿ ನೀಡಿಲಾಗಿದೆ. ಅಭಿಯಾನ ಮುಗಿದ ಬಳಿಕ ಅಂದರೆ ಆ.15ರ ಸೋಮವಾರ ಸಂಜೆ ರಾಷ್ಟ್ರಧ್ವಜವನ್ನು ನಿಯಮಾನುಸಾರ ತೆಗೆದು ಮನೆಗಳಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು’ ಎಂದು ಹೇಳಿದರು.
ಸಭೆಯಲ್ಲಿ ಎಲ್ಲಾ ವಲಯ ಜಂಟಿ ಆಯುಕ್ತರು, ನೋಡಲ್ ಅಧಿಕಾರಿಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.