ADVERTISEMENT

ವೈಟ್‌ ಟಾಪಿಂಗ್‌ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ತುಷಾರ್‌ ಗಿರಿನಾಥ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2024, 16:00 IST
Last Updated 6 ಡಿಸೆಂಬರ್ 2024, 16:00 IST
ತುಷಾರ್‌ ಗಿರಿನಾಥ್‌
ತುಷಾರ್‌ ಗಿರಿನಾಥ್‌   

ಬೆಂಗಳೂರು: ಬಿವಿಕೆ ಅಯ್ಯಂಗಾರ್ ರಸ್ತೆ, ಮೆಜೆಸ್ಟಿಕ್‌ನಲ್ಲಿ 350 ಮೀಟರ್‌ ರಸ್ತೆ, ಬಿನ್ನಿ ಮಿಲ್‌ ರಸ್ತೆಯಲ್ಲಿ 220 ಮೀಟರ್‌ ಉದ್ದದ ರಸ್ತೆಯಲ್ಲಿ ನಡೆಸುತ್ತಿರುವ ವೈಟ್‌ ಟಾಪಿಂಗ್‌ ಕಾಮಗಾರಿಯನ್ನು ಶೀಘ್ರ ಮುಗಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದರು.

ಪಶ್ವಿಮ ವಲಯ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಿಗೆ ಶುಕ್ರವಾರ ಭೇಟಿ ನೀಡಿ, ಕಾಮಗಾರಿಗಳ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಮಾತನಾಡಿದರು.

ಬಿವಿಕೆ ಅಯ್ಯಂಗಾರ್ ರಸ್ತೆ, ಚಿಕ್ಕಪೇಟೆ ಜಂಕ್ಷನ್‌ನಿಂದ ಸುಲ್ತಾನ್ ಪೇಟೆ ಜಂಕ್ಷನ್‌ವರೆಗಿನ 190 ಮೀಟರ್ ಉದ್ದದ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ ಒಂದು ಬದಿಯಲ್ಲಿ ಪೂರ್ಣವಾಗಿದ್ದು, ಇನ್ನೊಂದು ಬದಿಯ ಕಾಮಗಾರಿ ಪೂರ್ಣಗೊಳಿಸಿ ಡಿಸೆಂಬರ್ 15ರೊಳಗಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಚಿಸಿದರು.

ADVERTISEMENT

ಗೂಡ್ಸ್‌ ಶೆಡ್ ರಸ್ತೆಯಲ್ಲಿ ನಿರ್ಗತಿಕರ ರಾತ್ರಿ ವಸತಿ ರಹಿತ ತಂಗುದಾಣದಲ್ಲಿ 30 ನಿರಾಶ್ರಿತರಿಗೆ ತಂಗಲು ವ್ಯವಸ್ಥೆ ಇದ್ದು, ನಿರಾಶ್ರಿತರನ್ನು ಹುಡುಕಿ ತಂದು ಇಲ್ಲಿ ಆಶ್ರಯ ನೀಡಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಮಲ್ಲೇಶ್ವರ ವ್ಯಾಪ್ತಿಯಲ್ಲಿ ವ್ಯಾಪಾರ ವಲಯಗಳಲ್ಲದ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ. ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಲಾಗುತ್ತಿದ್ದು, ವ್ಯಾಪಾರ ವಲಯ (ವೆಂಡಿಂಗ್ ಜೋನ್) ಗುರುತಿಸಲಾಗುತ್ತದೆ ಎಂದು ವ್ಯಾಪಾರಿಗಳಿಗೆ ಭರವಸೆ ನೀಡಿದರು.

ನಾಗರಿಕರಿಂದ ಸುಮಾರು 67 ದೂರುಗಳು ಬಂದಿದ್ದು, ಕಾಲಮಿತಿಯೊಳಗೆ ಪರಿಹಾರ ಕಲ್ಪಿಸಬೇಕು ಎಂದು ತುಷಾರ್‌ ಗಿರಿನಾಥ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ವಲಯ ಜಂಟಿ ಆಯುಕ್ತ ಸಂಗಪ್ಪ, ಮುಖ್ಯ ಎಂಜಿನಿಯರ್‌ಗಳಾದ ಶಶಿಕುಮಾರ್, ಲೋಕೇಶ್, ಉಪ ಆಯುಕ್ತ ಶ್ರೀನಿವಾಸ್ ಉಪಸ್ಥಿತರಿದ್ದರು.

ಜಕ್ಕರಾಯನ ಕೆರೆ ಆಟದ ಮೈದಾನದಲ್ಲಿ ಎಸ್‌ಟಿಎಸ್‌

ಸುಭಾಷ್ ನಗರದ ಜಕ್ಕರಾಯನ ಕೆರೆ ಆಟದ ಮೈದಾನದಲ್ಲಿ ಎರಡು 'ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಘಟಕಗಳನ್ನು’ (ಎಸ್‌ಟಿಎಸ್‌) ನಿರ್ಮಾಣ ಮಾಡಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅಧಿಕಾರಿಗಳಿಗೆ ಸೂಚಿಸಿದರು. ‘ಜಕ್ಕರಾಯನ ಕೆರೆ ಆಟದ ಮೈದಾನ ಸುಮಾರು ಐದು ಎಕರೆ ವಿಸ್ತೀರ್ಣದಲ್ಲಿದ್ದು ಪೊಲೀಸ್ ಇಲಾಖೆಯಿಂದ 6000ಕ್ಕೂ ಹೆಚ್ಚು ‘ಅನಾಥ ವಾಹನಗಳನ್ನು’ ನಿಲ್ಲಿಸಲಾಗಿದೆ. ಇಲ್ಲಿ ಸ್ವಚ್ಛತೆ ಕಾಪಾಡದ ಕಾರಣ ಅಕ್ಕ-ಪಕ್ಕದ ಮನೆಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ’ ಎಂದು ನಾಗರಿಕರು ದೂರಿದರು. ‘ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರು ಪೊಲೀಸ್ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಮೈದಾನದಲ್ಲಿ ನಿಲ್ಲಿಸಿರುವ ಎಲ್ಲಾ ವಾಹನಗಳನ್ನು ತೆರವುಗೊಳಿಸಬೇಕು. ಆ ಸ್ಥಳದಲ್ಲಿ ಗಾಂಧಿನಗರ ಹಾಗೂ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರಗಳಿಗೆ ಪ್ರತ್ಯೇಕವಾಗಿ ಎಸ್‌ಟಿಎಸ್‌ ನಿರ್ಮಾಣ ಮಾಡಬೇಕು. ಜೊತೆಗೆ ಉದ್ಯಾನವನ್ನೂ ನಿರ್ಮಿಸಬೇಕು. ಈ ಬಗ್ಗೆ ಕೂಡಲೆ ಪ್ರಸ್ತಾವ ಸಲ್ಲಿಸಬೇಕು’ ಎಂದು ತುಷಾರ್‌ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.