ಬೆಂಗಳೂರು: ಕೋವಿಡ್ನಿಂದ ಮೃತಪಟ್ಟ ಸಿಬ್ಬಂದಿಗೆ ತಲಾ ₹ 30 ಲಕ್ಷ ಪರಿಹಾರ ನೀಡುವ ಸಲುವಾಗಿ ಬಿಬಿಎಂಪಿಯು ಅಧಿಕಾರಿಗಳ ತಂಡವನ್ನು ರಚಿಸಿದೆ.
ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಈ ಕುರಿತು ಇದೇ 8ರಂದು ಆದೇಶ ಹೊರಡಿಸಿದ್ದಾರೆ. ಆಯಾ ವಲಯಗಳ ವಲಯ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಆರೋಗ್ಯಾಧಿಕಾರಿಗಳು ಈ ತಂಡದಲ್ಲಿರಲಿದ್ದಾರೆ. ಕೋವಿಡ್ನಿಂದ ಸತ್ತ ಕಾಯಂ ನೌಕರರ ವಿವರಗಳನ್ನು ಪರಿಶೀಲಿಸಿ ಈ ತಂಡವು ಪರಿಹಾರ ಬಿಡುಗಡೆಗೆ ಕ್ರಮಕೈಗೊಳ್ಳಬೇಕು. ಪಿ–3558 ಭತ್ಯೆ ಮತ್ತು ಸೌಲಭ್ಯ ಲೆಕ್ಕ ಶೀರ್ಷಿಕೆಯಡಿ ಪರಿಹಾರದ ಮೊತ್ತ ಪಾವತಿಸಬೇಕು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಬಿಬಿಎಂಪಿ ಸಿಬ್ಬಂದಿ ಮುಂಚೂಣಿಯಲ್ಲಿದ್ದಾರೆ. ಕೋವಿಡ್ ನಿಯಂತ್ರಣ ಕಾರ್ಯದ ವೇಳೆ ಕರ್ತವ್ಯದಲ್ಲಿ ತೊಡಗಿದ್ದ 40ಕ್ಕೂ ಅಧಿಕ ಸಿಬ್ಬಂದಿಯನ್ನು ಬಿಬಿಎಂಪಿ ಕಳೆದುಕೊಂಡಿದೆ. ಯಾವ ಸಂತ್ರಸ್ತ ಕುಟುಂಬಕ್ಕೂ ಪರಿಹಾರ ಕೈಸೇರಿಲ್ಲ.
‘ಪ್ರಜಾವಾಣಿ‘ಯು ಮೇ 18ರ ಸಂಚಿಕೆಯಲ್ಲಿ ‘10 ತಿಂಗಳು ಅಲೆದರೂ ಸಿಕ್ಕಿಲ್ಲ ಕೋವಿಡ್ ಪರಿಹಾರ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಗೌರವ್ ಗುಪ್ತ ಭರವಸೆ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.