
ಬೆಂಗಳೂರು: ಜಿಬಿಎ ಆವರಣದಲ್ಲಿ ಸುಸಜ್ಜಿತವಾದ ಕ್ಯಾಂಟೀನ್ ನಿರ್ಮಾಣ ಕಾಮಗಾರಿಗೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಶುಕ್ರವಾರ ಚಾಲನೆ ನೀಡಿದರು.
ಅಧಿಕಾರಿ, ಸಿಬ್ಬಂದಿ ಮತ್ತು ಕಚೇರಿಗೆ ಭೇಟಿ ನೀಡುವ ನಾಗರಿಕರ ಅನುಕೂಲಕ್ಕಾಗಿ, ಡಾ. ರಾಜ್ಕುಮಾರ್ ಗಾಜಿನ ಮನೆಯ ಪಕ್ಕದಲ್ಲಿ ಕ್ಯಾಂಟೀನ್ ನಿರ್ಮಿಸಲಾಗುತ್ತಿದೆ. 40×30 ಅಡಿ ವಿಸ್ತೀರ್ಣದ ಜಾಗದಲ್ಲಿ ನೆಲ ಮಹಡಿ ಹಾಗೂ ಮೊದಲ ಮಹಡಿಯನ್ನು ಒಳಗೊಂಡ ಕಟ್ಟಡಕ್ಕೆ ಒಟ್ಟು ₹98 ಲಕ್ಷ ವೆಚ್ಚ ಮಾಡಲಾಗುತ್ತಿದೆ ಎಂದು ಮಹೇಶ್ವರ್ ರಾವ್ ತಿಳಿಸಿದರು.
ಕ್ಯಾಂಟೀನ್ನಲ್ಲಿ ಗುಣಮಟ್ಟದ ಉಪಾಹಾರ, ವಿವಿಧ ಆಹಾರ ಪದಾರ್ಥಗಳು, ಕಾಫಿ/ ಟೀ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಕಟ್ಟಡದ ನೆಲ ಮಹಡಿಯಲ್ಲಿ ಸ್ವಸಹಾಯ ವ್ಯವಸ್ಥೆ ಮತ್ತು ಮೊದಲ ಮಹಡಿಯಲ್ಲಿ ಸರ್ವೀಸ್ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಒಂದು ವರ್ಷದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ಕೇಂದ್ರ ನಗರ ಪಾಲಿಕೆ ಜಂಟಿ ಆಯುಕ್ತರಾದ ಹೇಮಂತ್ ಶರಣ್ ಉಪಸ್ಥಿತರಿದ್ದರು.
‘ಸಾವಿರಾರು ಜನರಿಗೆ ಅನುಕೂಲ’
ಜಿಬಿಎ ನಗರ ಪಾಲಿಕೆ ಸಿಬ್ಬಂದಿ ಹಾಗೂ ನಾಗರಿಕರಿಗೆ ಗುಣಮಟ್ಟದ ಆಹಾರ ಕಲ್ಪಿಸುವ ಅಗತ್ಯವಿತ್ತು. ಕಾಫಿ ಕುಡಿಯಲೂ ಜಿಬಿಎ ಆವರಣದ ಹೊರಗೇ ಹೋಗಬೇಕಾಗಿತ್ತು. ಹೀಗಾಗಿ ಸಂಘದ ಮನವಿಗೆ ಜಿಬಿಎ ಮುಖ್ಯ ಆಯುಕ್ತರು ಸ್ಪಂದಿಸಿ ಸುಸಜ್ಜಿತವಾದ ಕ್ಯಾಂಟೀನ್ ನಿರ್ಮಿಸಲು ಸಮ್ಮತಿಸಿದರು. ಗುಣಮಟ್ಟದ ಆಹಾರ ಹಾಗೂ ಸಕಲ ಸೌಲಭ್ಯಗಳೊಂದಿಗೆ ಕ್ಯಾಂಟೀನ್ ಶೀಘ್ರವೇ ಕಾರ್ಯಾರಂಭ ಮಾಡಲಿದ್ದು ನಿತ್ಯವೂ ಸಾವಿರಾರು ಜನರಿಗೆ ಅನುಕೂಲವಾಗಲಿದೆ ಎಂದು ಜಿಬಿಎ– ನಗರ ಪಾಲಿಕೆಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತ್ರಾಜ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.