ಬೆಂಗಳೂರು: ‘ಕರಗ ಮಹೋತ್ಸವವನ್ನು ದೇವಸ್ಥಾನದ ಆವರಣಕ್ಕೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಇದೇ 17ರ ಒಳಗೆ ಮತ್ತೊಂದು ಸಮನ್ವಯ ಸಭೆ ಕರೆದು ಮಹೋತ್ಸವದ ವಿಧಾನಗಳ ಬಗ್ಗೆೆ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.
ಕರಗ ಉತ್ಸವ ಸಂಬಂಧ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಗುರುವಾರ ಸಭೆ ನಡೆಸಿದ ಅವರು, ‘ನಗರದಲ್ಲಿ ಮತ್ತು ಶ್ರೀ ಧರ್ಮರಾಯ ಸ್ವಾಮಿ ದೇಗುಲದ ಸುತ್ತ–ಮುತ್ತ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಮೆರವಣಿಗೆಗೆ ಅವಕಾಶ ನೀಡದೆ, ದೇಗುಲದ ಒಳಗೆ 5 ರಿಂದ 7 ಜನರು ಒಳಗೊಂಡತೆ ಪೂಜೆ ವಿಧಿ ವಿಧಾನವನ್ನು ನಡೆಸಲು ಅನುಮತಿ ನೀಡುವ ಚಿಂತನೆ ಇದೆ’ ಎಂದರು.
ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ್, ‘ಕಳೆದ ವರ್ಷವೂ ಕರಗ ಉತ್ಸವವನ್ನು ಕೇವಲ 5 ಜನರ ನೇತೃತ್ವದಲ್ಲಿ ಗರ್ಭಗುಡಿಯ ಒಳಗಡೆ ನೆರವೇರಿಸಲಾಯಿತು. ಈ ವರ್ಷ ಸ್ವಲ್ಪ ಸಡಿಲಿಕೆ ನೀಡಬೇಕು’ ಎಂದು ಕೋರಿದರು.
ಶಾಸಕ ಉದಯ ಗರುಡಾಚಾರ್, ‘ಹೆಚ್ಚು ಸಡಿಲಿಕೆ ಬೇಡ. ಜನರ ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕಾದುದು ಅವಶ್ಯ’ ಎಂದರು.
ಉತ್ಸವ ಸಮಿತಿ:ಈ ವರ್ಷ ಕರಗ ಉತ್ಸವ ವ್ಯವಸ್ಥಾಪನಾ ಸಮಿತಿ ಅಸ್ತಿತ್ವದಲ್ಲಿ ಇಲ್ಲ. ಬದಲಾಗಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರು ಕರಗ ಉತ್ಸವ ಸಮಿತಿ ರಚಿಸಿದ್ದಾರೆ. ಈ ಉತ್ಸವ ಸಮಿತಿಯು ದೇವಾಲಯಕ್ಕೆೆ ಸೀಮಿತವಾಗಿ ಕರಗ ಆಚರಣೆ ಕುರಿತು ವಿಧಿವಿಧಾನ ಮತ್ತು ಸಂಪ್ರದಾಯದ ಕುರಿತು ಏ.17ಕ್ಕೆ ವರದಿ ನೀಡಲಿದೆ.
‘ರಾಜ್ಯ ಸರ್ಕಾರ ಮುಸ್ಲಿಂ ಮುಖಂಡರೊಂದಿಗೆ ಚರ್ಚಿಸಿ ಕೋವಿಡ್ ಸೋಂಕು ಹರಡದಂತೆ ಎಚ್ಚರಿಕೆ ವಹಿಸಿ, ರಂಜಾನ್ ಆಚರಣೆ ಬಗ್ಗೆೆ ಕೋವಿಡ್ ಮಾರ್ಗಸೂಚಿ ಹೊರಡಿಸಿದೆ. ಈ ಮಾರ್ಗಸೂಚಿ ಪಾಲನೆಗೆ ಅವಶ್ಯವಿರುವ ಸಿಬ್ಬಂದಿ ನೆರವನ್ನು ಪಾಲಿಕೆ ನೀಡಲಿದೆ’ ಎಂದೂ ಗೌರವ್ ಗುಪ್ತ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.