ADVERTISEMENT

ಬಿಬಿಎಂಪಿ ಲಾರಿ ಗುದ್ದಿ ವೃದ್ಧ ಸಾವು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 18:26 IST
Last Updated 31 ಮಾರ್ಚ್ 2022, 18:26 IST
   

ಬೆಂಗಳೂರು: ಬಾಗಲೂರು ಬಳಿ ಬಿಬಿಎಂಪಿ ಕಸ ಸಾಗಣೆ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಸವಾರ ರಾಮಯ್ಯ (76) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

‘ಸಂಪಿಗೆಹಳ್ಳಿ ನಿವಾಸಿ ರಾಮಯ್ಯ, ಸಂಬಂಧಿ ಯುವತಿಯೊಬ್ಬರಿಗೆ ಸಾತನೂರಿನಲ್ಲಿ ವರನನ್ನು ನೋಡಿಕೊಂಡು ಗುರುವಾರ ಮಧ್ಯಾಹ್ನ ಮನೆಗೆ ವಾಪಸು ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತದ ನಂತರ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ’ ಎಂದು ಚಿಕ್ಕಜಾಲ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ಬಿಬಿಎಂಪಿ ಲಾರಿ ಚಾಲಕನ ನಿರ್ಲಕ್ಷ್ಯ ಹಾಗೂ ಅತೀ ವೇಗದ ಚಾಲನೆಯಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ರಾಮಯ್ಯ ಪುತ್ರ ರಾಜಶೇಖರ್ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ತಿಳಿಸಿದರು.

ADVERTISEMENT

‘ಕುಟುಂಬ ಸದಸ್ಯರ ಜೊತೆ ರಾಮಯ್ಯ ಸಾತನೂರಿಗೆ ಹೋಗಿದ್ದರು. ವಾಪಸು ಒಬ್ಬರೇ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದರು. ಕುಟುಂಬದವರು ಕಾರಿನಲ್ಲಿ ಬರುತ್ತಿದ್ದರು.'

'ರೇವಾ ಜಂಕ್ಷನ್ ಮೂಲಕ ರೇವಾ ಕಾಲೇಜಿನ 2ನೇ ಪ್ರವೇಶದ್ವಾರದ ಎದುರಿನ ರಸ್ತೆಯಲ್ಲಿ ರಾಮಯ್ಯ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಆಗ ಲಾರಿ ಗುದ್ದಿತ್ತು. ದ್ವಿಚಕ್ರ ವಾಹನ ಸಮೇತ ರಸ್ತೆಯಲ್ಲಿ ಬಿದ್ದಿದ್ದ ರಾಮಯ್ಯ ಅವರ ಕಾಲುಗಳ ಮೇಲೆ ಲಾರಿ ಚಕ್ರಗಳು ಹರಿದಿದ್ದವು. ಸಹಾಯಕ್ಕೆ ಬಂದಿದ್ದ ಸ್ಥಳೀಯರು, ರಾಮಯ್ಯ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ರಾಮಯ್ಯ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು’ ಎಂದೂ ಪೊಲೀಸರು ಹೇಳಿದರು.

ಹೆಬ್ಬಾಳ ಬಳಿ ಮಾರ್ಚ್ 21ರಂದು ಬಿಬಿಎಂಪಿ ಕಸ ಸಾಗಣೆ ಲಾರಿ ಗುದ್ದಿ ಬಾಲಕಿ ಅಕ್ಷಯಾ (14) ಮೃತಪಟ್ಟಿದ್ದಳು. ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.