ಬೆಂಗಳೂರು: ಕಾರ್ನಲ್ಲಿ ಚಾಲಕ ಒಬ್ಬರೇ ಪ್ರಯಾಣಿಸುತ್ತಿದ್ದರೂ ಮಾಸ್ಕ್ ಬಳಕೆ ಕಡ್ಡಾಯವೇ ಎಂಬುದರ ಕುರಿತು ಆರೋಗ್ಯ ಇಲಾಖೆಯಿಂದ ಬಿಬಿಎಂಪಿ ಸ್ಪಷ್ಟನೆ ಕೋರಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವಿದ್ ಅಕ್ತರ್ ಅವರಿಗೆ ಪತ್ರ ಬರೆದಿರುವ ಪಾಲಿಕೆ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಎರಡು ಪ್ರಶ್ನೆಗಳನ್ನು ಕೇಳಿದ್ದಾರೆ.
‘ಕಾರಿನಲ್ಲಿ ಎಲ್ಲಾ ಗಾಜುಗಳನ್ನು ಮುಚ್ಚಿ ಒಬ್ಬರೇ ಪ್ರಯಾಣಿಸವಾಗ ಮಾಸ್ಕ್ ಧರಿಸಬೇಕೆ, ದ್ವಿಚಕ್ರ ವಾಹನದಲ್ಲಿ ಒಬ್ಬರೇ ಪ್ರಯಾಣಿಸುವಾಗಲೂ ಮಾಸ್ಕ್ ಕಡ್ಡಾಯವೇ’ ಎಂಬುದರ ಕುರಿತು ತಿಳಿಸುವಂತೆ ಕೋರಿದ್ದಾರೆ. ‘ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗುತ್ತಿರುವ ಕಾರಣ ಸ್ಪಷ್ಟನೆ ಕೋರಲಾಗಿದೆ. ಪ್ರತಿಕ್ರಿಯೆ ಬಂದರೆ ಆದೇಶ ಮಾರ್ಪಡಿಸಲಾಗುವುದು’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸೋಂಕಿತರ ಪ್ರಮಾಣ ಇಳಿಕೆ: ನಗರದ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಮಾಸ್ಕ್ ಬಳಕೆ, ಅಂತರ ಕಾಪಾಡುವಿಕೆಗೆ ಕೈಗೊಂಡ ಕ್ರಮಗಳೇ ಇದಕ್ಕೆ ಕಾರಣ ಎಂದರು.
ದಿನಕ್ಕೆ 2 ಸಾವಿರದಿಂದ 3 ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದಾಗ ಸೋಂಕಿತರ ಪ್ರಮಾಣ ಶೇ 24.15ರಷ್ಟಿತ್ತು. ಈಗ ದಿನಕ್ಕೆ 53 ಸಾವಿರ ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.
‘ನಗರದ ಹೊರ ವಲಯಗಳಲ್ಲೂ ಜನರಲ್ಲಿ ಜಾಗೃತಿ ಮೂಡಿಸಿ ಸೋಂಕು ಹರಡುವುದನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.