ADVERTISEMENT

ಮೇಲ್ಮನವಿ ಪ್ರಾಧಿಕಾರ: ಬಿಬಿಎಂಪಿ ಆಯುಕ್ತರಿಗೆ ಹೊಣೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 22:17 IST
Last Updated 24 ಸೆಪ್ಟೆಂಬರ್ 2020, 22:17 IST
   

ಬೆಂಗಳೂರು: ಬೆಂಗಳೂರು ವ್ಯಾಪ್ತಿಯ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ, ಕುಂದುಕೊರತೆಗಳಿಗೆ ಸಂಬಂಧಿಸಿದ ಮೇಲ್ಮನವಿ ಪ್ರಾಧಿಕಾರದ ಹೊಣೆಯನ್ನು ಜಿಲ್ಲಾಧಿಕಾರಿಯಿಂದ ಬಿಬಿಎಂಪಿ ಆಯುಕ್ತರಿಗೆ ವರ್ಗಾಯಿಸುವ ಉದ್ದೇಶದಿಂದ ಮಂಡಿಸಿದ ‘ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ತಿದ್ದುಪಡಿ’ ಮಸೂದೆಗೆ ವಿಧಾನಪರಿಷತ್‌ನ ವಿರೋಧ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

‘ಬಿಬಿಎಂಪಿ ಆಯುಕ್ತರು ತಲೆ ಬಾಚಿದ್ದನ್ನೇ ನೋಡಿಲ್ಲ, ಅಷ್ಟು ಕೆಲಸ ಈಗಾಗಲೇ ಅವರಿಗಿದೆ. ವಿಶೇಷ ಜಿಲ್ಲಾಧಿಕಾರಿಗಳಿದ್ದಾರೆ, ಇತರ ಅಧಿಕಾರಿಗಳಿದ್ದಾರೆ. ಅವರಿಗೆ ಈ ಜವಾಬ್ದಾರಿ ಕೊಡಿ’ ಎಂದು ಜೆಡಿಎಸ್‌ನ ಮರಿತಿಬ್ಬೇಗೌಡ ಸಲಹೆ ನೀಡಿದರು.

ಕಾಂಗ್ರೆಸ್‌ನ‌ ಎಂ. ನಾರಾಯಣಸ್ವಾಮಿ, ‘ಆಯುಕ್ತರಿಗೆ ಒತ್ತಡ ಹೆಚ್ಚಿರುವ ಕಾರಣ ಅದೇ ಶ್ರೇಣಿಯಬೇರೆ ಅಧಿಕಾರಿಗೆ ಜವಾಬ್ದಾರಿ ನೀಡಿ. 10 ವಲಯಗಳಾಗಿ ಹೆಚ್ಚಿಸುವ ಪ್ರಸ್ತಾವ ಇರು ವುದರಿಂದ, ವಲಯ ಆಯುಕ್ತರಿಗೆ ಜವಾಬ್ದಾರಿ ನೀಡಿ’ ಎಂದರು.

ADVERTISEMENT

ಕಾಂಗ್ರೆಸ್‌ನ‌ ಆರ್.ಬಿ. ತಿಮ್ಮಾಪೂರ, ‘ಈ ಪ್ರಾಧಿಕಾರದಲ್ಲಿ ಮುಖ್ಯ ಆರೋಗ್ಯಾಧಿಕಾರಿಯೂ ಇರುತ್ತಾರೆ. ಅದರ ಬದಲು ಆರೋಗ್ಯ ಇಲಾಖೆ ಅಧಿಕಾರಿ ಬಿಟ್ಟು ಬೇರೆ ಅಧಿಕಾರಿ ನೇಮಿಸಬೇಕು’ ಎಂದರು.‘ಬಿಬಿಎಂಪಿ ವ್ಯಾಪ್ತಿ ಜಿಲ್ಲಾಧಿಕಾರಿಯ ವ್ಯಾಪ್ತಿ ಮೀರಿದೆ. ಬೇರೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯೇ ಪ್ರಾಧಿಕಾರದ ಮುಖ್ಯಸ್ಥರಾಗಿರುತ್ತಾರೆ. ಹೀಗಾಗಿ, ಆಯುಕ್ತರಿಗೆ ಹೊಣೆ ನೀಡಲು ತಿದ್ದುಪಡಿ ಮಾಡಲಾಗುತ್ತಿದೆ’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸಮರ್ಥಿಸಿದರು ಆರೋಗ್ಯ ಸಚಿವ ಶ್ರೀರಾಮುಲು, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಪ್ರದೇಶ ಇರುವ ಕಾರಣ ಮತ್ತು ಕಂಟೈನ್‌ಮೆಂಟ್‌ ವಲಯ ಗಳನ್ನು ಬಿಬಿಎಂಪಿ ಆಯುಕ್ತರೇ ನಿರ್ವಹಿಸುತ್ತಿರುವುದರಿಂದ ಈ ಬದಲಾವಣೆ ಮಾಡಲಾಗಿದೆ’ ಎಂದರು. ಧ್ವನಿಮತದ ಮೂಲಕ ಅಂಗೀಕಾರ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.