ADVERTISEMENT

ಬಿಬಿಎಂಪಿ: 243 ವಾರ್ಡ್‌ಗಳಿಗೆ ನೋಡಲ್‌ ಅಧಿಕಾರಿ

ಪುನರ್‌ವಿಂಗಡಣೆಯಂತೆ ವಾರ್ಡ್ ಸಮಿತಿ ಸಭೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 21:30 IST
Last Updated 2 ಆಗಸ್ಟ್ 2022, 21:30 IST
   

ಬೆಂಗಳೂರು: ಆಗಸ್ಟ್‌ 3ನೇ ಶನಿವಾರದಿಂದ 243 ವಾರ್ಡ್‌‌ಗಳ ಅನುಸಾರ ವಾರ್ಡ್‌ ಸಮಿತಿ ಸಭೆ ನಡೆಸಬೇಕು ಎಂದು ವಲಯಆಯುಕ್ತರಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದರು.

ಪೂರ್ವ ವಲಯ ವ್ಯಾಪ್ತಿಯಲ್ಲಿ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಲ್ಲಿ ಸೋಮವಾರ ಅಧಿಕಾರಿಗಳಿಗೆ ಮುಖ್ಯ ಆಯುಕ್ತ ಆದೇಶಿಸಿದರು.

ಬಿಬಿಎಂಪಿ ಅಧಿನಿಯಮ 2020ರ ಅನುಸಾರ 243 ವಾರ್ಡ್‌ಗಳಾಗಿವೆ. ಅದರಂತೆ ಆಗಸ್ಟ್ ಮೊದಲನೆ ಶನಿವಾರ 198 ವಾರ್ಡ್‌ಗಳಲ್ಲಿ ಸಭೆ ನಡೆಯಲಿದೆ. 3ನೇ ಶನಿವಾರದಿಂದ 243 ವಾರ್ಡ್ ಅನುಸಾರ ವಾರ್ಡ್ ಸಮಿತಿ ಸಭೆಗಳನ್ನು ನಡೆಸಬೇಕು. ಸಮಿತಿಯ ಸದಸ್ಯರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ನಾಗರಿಕರಿಗೆ ನಿಖರ ಮಾಹಿತಿ ಒದಗಿಸಬೇಕು. ಅಲ್ಲದೆ ಹೊಸ ವಾರ್ಡ್‌ಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲು ವಲಯ ಆಯುಕ್ತರಿಗೆ ಸೂಚನೆ ನೀಡಿದರು.

ADVERTISEMENT

ಪೂರ್ವ ವಲಯ ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಪಾಲಕ ಎಂಜಿನಿಯರ್‌ಗಳು ರಸ್ತೆ ಗುಂಡಿ, ಪಾದಚಾರಿ ಮಾರ್ಗಗಳ ಅಭಿವೃದ್ಧಿಗಾಗಿ ವಾರ್ಡ್‌ವಾರು ಮೀಸಲಿಟ್ಟಿರುವ ಅನುದಾನವನ್ನು ಬಳಸಿಕೊಂಡು ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗೆ ಹೇಳಿದರು.

ಪುಲಕೇಶಿ ನಗರ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಕೋಲ್ಡ್ ಮಿಕ್ಸ್ ಹಾಕಿ ಮುಚ್ಚಬೇಕು. ಅಮೃತ ನಗರೋತ್ಥಾನದಡಿ ರಸ್ತೆಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದರು.

ಕಾಕ್ಸ್‌ಟೌನ್ ಮಾರುಕಟ್ಟೆ ಕಟ್ಟಡ ನಿರ್ಮಾಣದ ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು. ಕೊಳೆಗೇರಿ ಪ್ರದೇಶದ ಬಳಿ ಕಸದ ಕಿಯೋಸ್ಕ್ ಅಳವಡಿಸಬೇಕು. ಸುಂದರ ಮೂರ್ತಿ ರಸ್ತೆ ಬದಿ ಇ-ಶೌಚಾಲಯ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬೀದಿ ದೀಪಗಳ ಅಳವಡಿಕೆ, ಮರದ ಕೊಂಬೆ ಕತ್ತರಿಸುವುದು, ರಾಜಕಾಲುವೆಗಳು ಹಾಗೂ ರಸ್ತೆ ಬದಿಯ ಸೈಡ್ ಡ್ರೈನ್‌ಗಳಲ್ಲಿ ಹೂಳೆತ್ತುವುದು ಸೇರಿ ಸಾರ್ವಜನಿಕರು ತಿಳಿಸಿದ ಸಮಸ್ಯೆಗಳನ್ನು ಪೂರ್ಣಗೊಳಿಸಬೇಕು ಎಂದು ಮುಖ್ಯ ಆಯುಕ್ತರು ಹೇಳಿದರು.

ವಲಯ ಆಯುಕ್ತ ಪಿ.ಎನ್.ರವೀಂದ್ರ, ವಲಯ ಜಂಟಿ ಆಯುಕ್ತರಾದ ಶಿಲ್ಪಾ, ವಲಯ ಮುಖ್ಯ ಎಂಜಿನಿಯರ್‌ ಸುಗುಣಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.