ಬೆಂಗಳೂರು: ಬಿಬಿಎಂಪಿ 10 ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ಪುಟ್ಟೇನಹಳ್ಳಿ ಜಂಕ್ಷನ್ನಲ್ಲಿ ಕೆಳ ಸೇತುವೆ (ಜಿ.ಆರ್.ವಿಶ್ವನಾಥ್ ಕೆಳಸೇತುವೆ) ಕಾಮಗಾರಿಯ ಅಂತಿಮ ಬಿಲ್ ಅನ್ನು ಎಂಜಿನಿಯರಿಂಗ್ ಪ್ರಾಜೆಕ್ಟ್ಸ್ (ಇಂಡಿಯಾ) ಲಿಮಿಟೆಡ್ ಸಂಸ್ಥೆಗೆ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿಗೆ ಸೂಚಿಸಿದೆ.
ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತರಿಗೆನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮಂಗಳವಾರ (ಮೇ 24) ಪತ್ರ ಬರೆದಿದ್ದಾರೆ. ಬಿಬಿಎಂಪಿಯು ಈ ಕಾಮಗಾರಿಯನ್ನು ಕೇಂದ್ರ ಸರ್ಕಾರ ಸ್ವಾಮ್ಯದ ಮಿನಿರತ್ನ ಸಂಸ್ಥೆಯಾದ ಇಪಿಐಗೆ 2008ರಲ್ಲಿ ಗುತ್ತಿಗೆ ನೀಡಿತ್ತು. ಕಾಮಗಾರಿಗೆ ಸಂಬಂಧಿಸಿದ ₹7.48 ಕೋಟಿ ಬಾಕಿ ಬಿಲ್ ಅನ್ನು ಪಾವತಿಸುವಂತೆ ಒತ್ತಾಯಿಸಿ ಇಪಿಐ ಸಂಸ್ಥೆಯ ಹಿರಿಯ (ತಾಂತ್ರಿಕ) ವ್ಯವಸ್ಥಾಪಕ ಎಂ.ತಾವಸಿ ರಾಜನ್ ಅವರು ಪಾಲಿಕೆಯ ಮುಖ್ಯ ಆಯುಕ್ತರಿಗೆ ಮೇ 5ರಂದು ಪತ್ರ ಬರೆದಿದ್ದರು. ‘ಗುತ್ತಿಗೆ ಕರಾರಿಗೆ ಅನುಗುಣವಾಗಿಯೇ ಎಲ್ಲ ಕಾಮಗಾರಿ ಪೂರ್ಣಗೊಳಿಸಿದರೂ ಹಳೆ ಬಾಕಿ ಪಾವತಿ ಆಗಿಲ್ಲ’ ಎಂದಿದ್ದರು.
ಈ ಪ್ರಕರಣದ ಬಗ್ಗೆ ‘ಪ್ರಜಾವಾಣಿ’ಯು ‘10 ವರ್ಷ ಹಳೆಯ ಬಿಲ್ ಬಾಕಿ: ಇಪಿಐ– ಬಿಬಿಎಂಪಿ ತಿಕ್ಕಾಟ’ ಶೀರ್ಷಿಕೆಯಡಿ ಮೇ 6ರಂದು ವಿಶೇಷ ವರದಿ ಪ್ರಕಟಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.