ಬೆಂಗಳೂರು: ‘ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಹಿರಿಯರು ಹಾಗೂ ಹೆಚ್ಚು ವರ್ಷ ಕಾರ್ಯ
ನಿರ್ವಹಿಸಿದವರ ದಾಖಲೆ ಆಧರಿಸಿ 3 ಸಾವಿರ ಪೌರಕಾರ್ಮಿಕರನ್ನು ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್ ಖಾನ್ ತಿಳಿಸಿದರು.
ಪೌರಕಾರ್ಮಿಕರ ಸಮಸ್ಯೆ ಬಗ್ಗೆ ಚರ್ಚಿಸುವ ಸಲುವಾಗಿ ಮೇಯರ್ ಎಂ.ಗೌತಮ್ ಕುಮಾರ್ ಹಾಗೂ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
‘ಬಿಬಿಎಂಪಿಯು ಪ್ರತಿ 700 ಮಂದಿಗೆಒಬ್ಬ ಪೌರಕಾರ್ಮಿಕರನ್ನುನೇಮಿಸಿಕೊಂಡಿದ್ದು, ಪ್ರಸ್ತುತ 18 ಸಾವಿರ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 500 ಮಂದಿಗೆ ಒಬ್ಬ ಪೌರಕಾರ್ಮಿಕರನ್ನು ನಿಯೋಜನೆ ಮಾಡುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರು ಇತ್ತೀಚೆಗೆ ಸೂಚನೆ ನೀಡಿದ್ದಾರೆ. ಅದರ ಪ್ರಕಾರ 3 ಸಾವಿರ ಪೌರಕಾರ್ಮಿಕರನ್ನು ಹೆಚ್ಚುವರಿಯಾಗಿ ನೇಮಿಸಿಕೊಳ್ಳುವ ಬಗ್ಗೆ ಸರ್ಕಾರದ ಮಟ್ಟ
ದಲ್ಲಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ.ಈ ಬಗ್ಗೆ ಆಯುಕ್ತರ ಜೊತೆ ಚರ್ಚಿಸಿ ಪ್ರಸ್ತಾವ ಸಿದ್ಧಪಡಿಸುತ್ತೇವೆ’ ಎಂದರು.
‘ಪೌರಕಾರ್ಮಿಕರು ಹಾಗೂ ಮಲ ಎತ್ತುವವರು (ಮ್ಯಾನುಯಲ್ ಸ್ಕ್ಯಾವೆಂಜರ್ಗಳು) ಎದುರಿಸುತ್ತಿರುವ ಸಮಸ್ಯೆ ಇತ್ಯರ್ಥ ಪಡಿಸಲು ಪಾಲಿಕೆ ಆಯುಕ್ತರು, ಬಿಡಿಎ ಆಯುಕ್ತರು, ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಪರಸ್ಪರ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಸಲುವಾಗಿಯೇ ಪ್ರತ್ಯೇಕ ಅಧಿಕಾರಿಯನ್ನು ನೇಮಕ ಮಾಡಬೇಕು’ ಎಂದು ಮೇಯರ್ ಸೂಚಿಸಿದರು.
ಜಗದೀಶ್ ಹಿರೇಮನಿ, ‘ಕಸ ವಿಲೇವಾರಿ ಮಾಡುವ ಆಟೊ ಟಿಪ್ಪರ್ ಚಾಲಕ ಹಾಗೂ ಹೆಲ್ಪರ್ಗಳನ್ನು ಕೂಡಾ ಪೌರಕಾರ್ಮಿಕರನ್ನಾಗಿ ಪರಿಗಣಿಸಬೇಕು. ಪೌರಕಾರ್ಮಿಕರಿಗೆ ಸಿಗುತ್ತಿರುವ ಎಲ್ಲಾ ಸೌಲಭ್ಯಗಳು ಅವರಿಗೂ ಸಿಗಬೇಕು. ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯ ಗುತ್ತಿಗೆಯನ್ನು ಹೊರರಾಜ್ಯದವರಿಗೆ ನೀಡದೆ ಸ್ಥಳೀಯ ಪೌರಕಾರ್ಮಿಕರ ಅವಲಂಬಿತರಿಗೆ ನೀಡಬೇಕು’ ಎಂದು ಸೂಚನೆ ನೀಡಿದರು.
‘ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದಿಂದ ಪೌರಕಾರ್ಮಿಕರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಸಾಲ ಪಡೆಯಬಹುದು. ಈ ಸಲುವಾಗಿಯೇ ನಿಗಮಕ್ಕೆ ₹120 ಕೋಟಿ ಒದಗಿಸಲಾಗಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.