ADVERTISEMENT

ಬೆಂಗಳೂರು ಕೇಂದ್ರ ವಿವಿ: ಶತಮಾನದ ಸಂಭ್ರಮದಲ್ಲಿ ಸಸ್ಯವಿಜ್ಞಾನ ವಿಭಾಗ

ಸ್ಮರಣೆಗಾಗಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಿಂದ ಎರಡು ಕೋರ್ಸ್‌ ಆರಂಭ

ಎಂ.ಜಿ.ಬಾಲಕೃಷ್ಣ
Published 26 ಜುಲೈ 2019, 19:30 IST
Last Updated 26 ಜುಲೈ 2019, 19:30 IST
ಸೆಂಟ್ರಲ್‌ ಕಾಲೇಜ್‌ನ ಈ ಕಟ್ಟಡದಲ್ಲೇ ಸಸ್ಯವಿಜ್ಞಾನ ವಿಭಾಗ ಆರಂಭವಾಗಿತ್ತು.
ಸೆಂಟ್ರಲ್‌ ಕಾಲೇಜ್‌ನ ಈ ಕಟ್ಟಡದಲ್ಲೇ ಸಸ್ಯವಿಜ್ಞಾನ ವಿಭಾಗ ಆರಂಭವಾಗಿತ್ತು.   

ಬೆಂಗಳೂರು: ನಗರದ ಸೆಂಟ್ರಲ್‌ ಕಾಲೇಜು ಆವರಣದಲ್ಲಿ 1919ರಲ್ಲಿ ಆರಂಭವಾಗಿದ್ದ ಸಸ್ಯವಿಜ್ಞಾನ ವಿಭಾಗ (ಬಾಟನಿ) ಈ ವರ್ಷ ಶತಮಾನೋತ್ಸವ ಸಂಭ್ರಮದಲ್ಲಿದೆ. ಸೆಪ್ಟೆಂಬರ್‌ 12ರಂದು ಕಾರ್ಯಕ್ರಮ ನಡೆಸಲು ಸಿದ್ಧತೆ ಆರಂಭವಾಗಿದೆ.

‘ಜಗತ್ತಿನ ನಾನಾ ಕಡೆ ಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿ ರುವ ಹಳೆವಿದ್ಯಾರ್ಥಿಗಳೇ ವಿಭಾಗದ ಆಸ್ತಿ. ಅವರೆಲ್ಲ ಸೇರಿ ಇದೀಗ ಶತಮಾನೋತ್ಸವ ಸಂಭ್ರಮ ಆಚರಿಸುತ್ತಿದ್ದಾರೆ. ಸಸ್ಯವಿಜ್ಞಾನ ವಿಭಾಗ ಇದೀಗ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಮುಂದುವರಿದಿರಬಹುದು. ಆದರೆ, ವಿಭಾಗ ಆರಂಭವಾಗಿರುವುದು ಸೆಂಟ್ರಲ್‌ ಕಾಲೇಜು ಆವರಣದಲ್ಲಿ. ಹೀಗಾಗಿ ಸಂಭ್ರಮದಲ್ಲಿ ನಾವೆಲ್ಲ ಸಕ್ರಿಯವಾಗಿ ಪಾಲ್ಗೊಂಡಿದ್ದೇವೆ’ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಜಾಫೆಟ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಟ್ರಸ್ಟ್‌ ರಚನೆ: ವಿಭಾಗದ ಶತಮಾನೋತ್ಸವ ಆಚರಣೆಗೆ ಪ್ರೊ.ಸಿ.ಕಾಮೇಶ್ವರ ರಾವ್‌ ನೇತೃತ್ವದಲ್ಲಿ ಸೆಂಟ್ರಲ್‌ ಕಾಲೇಜು ಬಾಟನಿ ಅಲ್ಯುಮ್ನಿ ಚಾರಿಟಬಲ್ ಟ್ರಸ್ಟ್‌ (ಸಿಸಿಬಿಡಿಎಸಿ) ರಚಿಸಲಾಗಿದೆ.

ADVERTISEMENT

‘ಟ್ರಸ್ಟ್‌ ವತಿಯಿಂದ ₹ 2.51 ಲಕ್ಷದ ದತ್ತಿ ನಿಧಿ ಸ್ಥಾಪಿಸಲಾಗಿದೆ. ಇದರ ಬಡ್ಡಿ ಹಣದಲ್ಲಿ ಸಸ್ಯವಿಜ್ಞಾನಕ್ಕೆ ಸಂಬಂಧಿಸಿದಂತೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಶತಮಾನೋತ್ಸವ ಪ್ರಯುಕ್ತ ಜನ ವರಿಯಿಂದ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸ ಕಾರ್ಯಕ್ರಮಗವನ್ನುಆರಂಭಿಸಲಾಗಿದೆ. ಮುಂದಿನ ವರ್ಷದಿಂದ ವಾರ್ಷಿಕ ದತ್ತಿ ಉಪ ನ್ಯಾಸ ನಡೆಯಲಿದೆ’ ಎಂದು ಪ್ರೊ.ಕಾಮೇಶ್ವರ ರಾವ್‌ ತಿಳಿಸಿದರು.

ಬೆಂಗಳೂರು ಸೆಂಟ್ರಲ್‌ ವಿಶ್ವವಿದ್ಯಾಲಯದ ಜೀವವಿಜ್ಞಾನದ ಎರಡು ಎಂ‌ಎಸ್ಸಿ ಕೋರ್ಸ್‌ ಗಳನ್ನು ಕುಲಪತಿ ಪ್ರೊ.ಸಿ.ಜಾಫೆಟ್‌ ಅವರು ಸೆ.12ರಂದು ಉದ್ಘಾಟಿಸುವರು ಎಂದರು.

ಇತಿಹಾಸ: ಬೆಂಗಳೂರು ವಿಶ್ವವಿದ್ಯಾ ಲಯದ ಸಸ್ಯವಿಜ್ಞಾನ ವಿಭಾಗ ದೇಶದ ಅತ್ಯಂತ ಹಳೆಯ ವಿಭಾಗಗಳಲ್ಲಿ ಒಂದು. ಪ್ರೊ.ಎಂ.ಎ.ಸಂಪತ್‌ ಕುಮಾರನ್‌ ವಿಭಾಗದ ಪ್ರಥಮ ಮುಖ್ಯಸ್ಥರಾಗಿದ್ದರು. 1964ರಲ್ಲಿ ಬೆಂಗಳೂರು ವಿಶ್ವವಿದ್ಯಾ ಲಯ ಆರಂಭವಾದಾಗ ಸೆಂಟ್ರಲ್‌ ಕಾಲೇಜು ವಿಶ್ವವಿದ್ಯಾಲಯ ಕಾಲೇಜಾಗಿ ಬದ ಲಾಯಿತು. ಪ್ರೊ.ಎಂ.ನಾಗರಾಜ್‌ ವಿಭಾಗದ ಮುಖ್ಯಸ್ಥರಾದರು.ಸಸ್ಯವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ.ಎಂ.ಜೆ.ತಿರುನಾಲಾಚೆಲು, ಡಾ.ಕೆ.ಎಸ್‌.ಗೋಪಾಲಕೃಷ್ಣ, ಡಾ.ಎ.ಆರ್‌.ಗೋಪಾಲ ಅಯ್ಯಂಗಾರ್‌, ಡಾ.ಟಿ.ಎನ್‌.ರಾಮಚಂದ್ರ ರಾವ್‌, ಪ್ರೊ.ಕೌಶಿಕ್‌, ಪ್ರೊ.ಸಿ.ವಿ. ಸುಬ್ರಹ್ಮಣ್ಯಂ, ಪ್ರೊ.ನಾಗರಾಜ್‌, ಪ್ರೊ.ಡಿ.ಎ.ಗೋವಿಂದಪ್ಪ ಇಲ್ಲಿನ ಹಳೆವಿದ್ಯಾರ್ಥಿಗಳು.

**

ಶತಮಾನೋತ್ಸವ ಪ್ರಯುಕ್ತ ಸಸ್ಯ ವಿಜ್ಞಾನ ಮತ್ತು ಪ್ರಾಣಿ ವಿಜ್ಞಾನ ಸ್ನಾತಕೋತ್ತರ ಕೋರ್ಸ್‌ಗಳನ್ನು ಈ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲಾಗುತ್ತಿದೆ
- ಪ್ರೊ.ಸಿ.ಜಾಫೆಟ್‌ , ಕುಲಪತಿ, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.