ADVERTISEMENT

ಮೂಲಸೌಕರ್ಯ ಒದಗಿಸಿದ ನಂತರ ಪ್ರಕ್ರಿಯೆ: ಬಿಡಿಎ ಬಡಾವಣೆ ಶೀಘ್ರ ಬಿಬಿಎಂಪಿಗೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 5:13 IST
Last Updated 9 ಆಗಸ್ಟ್ 2022, 5:13 IST
ಬನಶಂಕರಿ 6ನೇ ಹಂತ, ಜೆ.ಪಿ. ನಗರ 8, 9 ನೇ ಹಂತ ಹಾಗೂ ಅಂಜನಾಪುರ ಮುಂದುವರೆದ ಬಡಾವಣೆಗಳ ಮೂಲಸೌಕರ್ಯವನ್ನು ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ಸೋಮವಾರ ಪರಿಶೀಲಿಸಿದರು. ಬಿಡಿಎ ಆಯುಕ್ತ ರಾಜೇಶ್‌ ಗೌಡ, ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಅಧಿಕಾರಿಗಳು ಇದ್ದರು
ಬನಶಂಕರಿ 6ನೇ ಹಂತ, ಜೆ.ಪಿ. ನಗರ 8, 9 ನೇ ಹಂತ ಹಾಗೂ ಅಂಜನಾಪುರ ಮುಂದುವರೆದ ಬಡಾವಣೆಗಳ ಮೂಲಸೌಕರ್ಯವನ್ನು ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ಸೋಮವಾರ ಪರಿಶೀಲಿಸಿದರು. ಬಿಡಿಎ ಆಯುಕ್ತ ರಾಜೇಶ್‌ ಗೌಡ, ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಅಧಿಕಾರಿಗಳು ಇದ್ದರು   

ಬೆಂಗಳೂರು: ಬನಶಂಕರಿ, ಅಂಜನಾಪುರ ಮತ್ತು ವಿಶ್ವೇಶ್ವರಯ್ಯ ಬಡಾವಣೆಗಳಿಗೆ ಮೂಲಸೌಕರ್ಯ ಒದಗಿಸಿ, ನಂತರ ಬಿಬಿಎಂಪಿಗೆ ಹಸ್ತಾಂತರಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ತಿಳಿಸಿದರು.

ಬನಶಂಕರಿ 6ನೇ ಹಂತ, ಜೆ.ಪಿ. ನಗರ 8, 9ನೇ ಹಂತ ಹಾಗೂ ಅಂಜನಾಪುರ ಮುಂದುವರೆದ ಬಡಾವಣೆಗಳ ಮೂಲಸೌಕರ್ಯವನ್ನು ಸೋಮವಾರ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಬಿಡಿಎ ಆಯುಕ್ತ ಎಂ.ಬಿ.ರಾಜೇಶ್ ಗೌಡ ಅವರ ನೇತೃತ್ವದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.

ADVERTISEMENT

ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳ ಅಹವಾಲು ಸ್ವೀಕರಿಸಿದ ವಿಶ್ವನಾಥ್, ‘ನಾನಾ ಕಾರಣಗಳಿಂದಾಗಿ ಅಂಜನಾಪುರ, ಬನಶಂಕರಿ ಮತ್ತು ವಿಶ್ವೇಶ್ವರಯ್ಯ ಬಡಾವಣೆಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ವಿಳಂಬವಾಗಿದೆ. ಕುಡಿವ ನೀರು, ಒಳಚರಂಡಿ, ವಿದ್ಯುತ್, ರಸ್ತೆ ಸಂಪರ್ಕ ಸೇರಿದಂತೆ ಇನ್ನಿತರೆ ಮೂಲಸೌಕರ್ಯಗಳನ್ನು ಕಲ್ಪಿಸಲು ಬಿಡಿಎ ಪ್ರಾಧಿಕಾರ ಮಂಡಳಿಯಲ್ಲಿ ನಿರ್ಧರಿಸಲಾಗಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಲಸೌಕರ್ಯಗಳನ್ನು ಒದಗಿಸಲು ಸೂಚಿಸಿದ್ದಾರೆ’ ಎಂದು ತಿಳಿಸಿದರು.

‘ಒಂದು ವರ್ಷದಲ್ಲಿ ವಿವಿಧ ಬಡಾವಣೆಗಳಲ್ಲಿ ಅತಿಕ್ರಮಿಸಿದವರ ವಿರುದ್ಧ ಸಮರ ಸಾರಿ ಕಾನೂನಿನಡಿ ಬಿಡಿಎ ಜಾಗವನ್ನು ಮರುವಶ ಪಡೆದುಕೊಳ್ಳಲಾಯಿತು. ಇದರಿಂದ ಸಂಸ್ಥೆಗೆ ಸಾಕಷ್ಟು ಆದಾಯ ಬಂದಿದೆ. ಜೊತೆಗೆ ಆರ್ಥಿಕ ಸಂಪನ್ಮೂಲಕ್ರೋಡೀಕರಣಕ್ಕೂ ಕಾರಣವಾಗಿದೆ. ಇದುವರೆಗೆ ಬಿಡಿಎಗೆ ಸೇರಿದ 9 ಸಾವಿರ ನಿವೇಶನಗಳನ್ನು ಪತ್ತೆ ಮಾಡಿದ್ದು, ಹಂತ ಹಂತವಾಗಿ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ. ಇದರಿಂದ ಇದುವರೆಗೆ ಸುಮಾರು ₹3 ಸಾವಿರ ಕೋಟಿ ಆದಾಯ ಬಂದಿದೆ’ ಎಂದರು.

‘ಬನಶಂಕರಿ ಮುಂದುವರಿದ ಬಡಾವಣೆಗೆ ಕುಡಿಯುವ ನೀರು ಪೂರೈಸಲು ಜಲಮಂಡಳಿಗೆ ₹54 ಕೋಟಿ ಪೈಕಿ ₹27.50 ಕೋಟಿ ಸಂದಾಯ ಮಾಡಲಾಗಿದೆ. ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗೆ ಹಣದ ಕೊರತೆ ಇಲ್ಲ’ ಎಂದು ತಿಳಿಸಿದರು.

‘ಬೆಂಗಳೂರು ದಕ್ಷಿಣ ಮತ್ತು ಯಶವಂತಪುರ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಬಿಡಿಎ ಬಡಾವಣೆಗಳ ಮೂಲಸೌಕರ್ಯಕ್ಕಾಗಿ ಸುಮಾರು ₹400 ಕೋಟಿ ಮೀಸಲಿಡಲಾಗಿದ್ದು, ಈಗಾಗಲೇ ₹200 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ’ ಎಂದರು.

‘ಅರ್ಕಾವತಿ ಬಡಾವಣೆಯ ಮೂಲಸೌಕರ್ಯಕ್ಕಾಗಿ ₹450 ಕೋಟಿ, ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆಗೆ ₹175 ಕೋಟಿ ಮೀಸಲಾಗಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸಲು ಅಗತ್ಯವಿರುವ ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತದೆ’ ಎಂದು ವಿಶ್ವನಾಥ್‌ ತಿಳಿಸಿದರು.

ಬಿಡಿಎ ಕಾರ್ಯದರ್ಶಿ ಆನಂದ್, ಎಂಜಿನಿಯರ್‌ ಸುರೇಶ್, ಅಶೋಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.