ADVERTISEMENT

ಬೆಳ್ಳಂದೂರು ಬೆಂಕಿಗೆ ತಾಮ್ರದ ಕೇಬಲ್‌ ಕಾರಣ?

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 19:50 IST
Last Updated 18 ಡಿಸೆಂಬರ್ 2018, 19:50 IST

ಬೆಂಗಳೂರು: ತಾಮ್ರವನ್ನು ಹೊರ ತೆಗೆಯುವುದಕ್ಕಾಗಿ ಸೂಕ್ಷ್ಮ ವಲಯದಲ್ಲಿಟೆಲಿಫೋನ್‌ ಕೇಬಲ್‌ ಸುಟ್ಟಿರುವುದು ಕೂಡ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣ ಎಂದುಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ಡಿಸೆಂಬರ್‌ 6ರಂದು ಬೆಳ್ಳಂದೂರು ಕೆರೆಯ ಹತ್ತಿರ ಕೇಬಲ್ ಸುಟ್ಟು ತಾಮ್ರವನ್ನು ತೆಗೆಯಲು ಯತ್ನಿಸುತ್ತಿರುವ ನಾಲ್ವರು ಆರೋಪಿಗಳನ್ನು ಬಿಬಿಎಂಪಿ ಮಾರ್ಷಲ್‌ಗಳು ವಶಕ್ಕೆ ‍ಪಡೆದಿದ್ದಾರೆ. ಈ ವೇಳೆ ಇದು ತಿಳಿದುಬಂದಿದೆ.

ತಮಿಳುನಾಡಿನ ಧರ್ಮಪುರಿ ಮೂಲದಚರಣಪ್ಪ, ಇ.ಪಾಂಡುರಂಗನ್‌, ಪ್ರಕಾಶ್ ಮತ್ತು ಸೆಂಥಿಲ್‌ ಸಿಕ್ಕಿಬಿದ್ದ ಆರೋಪಿಗಳು. ಇವರು ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ವಾಸವಾಗಿದ್ದು, ತಾಮ್ರವನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಗಸ್ತಿನಲ್ಲಿದ್ದಾಗ ನಮಗೆಕೇಬಲ್‌ ವೈರ್‌ನ ರಾಶಿಗೆ ಬೆಂಕಿ ಹಚ್ಚಿರುವುದು ಕಂಡಿತು. ಈ ಕೃತ್ಯದಲ್ಲಿ ತೊಡಗಿದವರನ್ನು ವಶಕ್ಕೆ ಪಡೆದು ಅವರಿಂದ 90 ಕೆ.ಜಿ. ತಾಮ್ರವನ್ನು ವಶಪಡಿಸಿಕೊಂಡಿದ್ದೇವೆ. ಬಂಧಿತರು ಪ್ರತಿ ಕೆ.ಜಿ ತಾಮ್ರವನ್ನು₹400ರ ದರದಲ್ಲಿ ಮಾರಾಟ ಮಾಡುತ್ತಿದ್ದರು. ಈಗಾಗಲೇ ಎಚ್‌ಎಸ್‌ಆರ್‌ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ’ ಎನ್ನುತ್ತಾರೆ ಮಾರ್ಷಲ್‌ಸೂಪರಿಂಟೆಂಡೆಂಟ್ ವೆಸ್ಲಿ ಫರ್ನಾಂಡಿಸ್‌.

‘ಆರೋಪಿಗಳು ಕೆರೆಯ ಸೂಕ್ಷ್ಮ ವಲಯದಲ್ಲಿ ಕೇಬಲ್ ಸುಟ್ಟಿರುವುದು ಕೆರೆ ಮಾಲಿನ್ಯಗೊಳ್ಳಲು ಕಾರಣ. ಆದ್ದರಿಂದ ನಾವು ಕೆರೆಯ ಸುತ್ತ ನಡೆಯುವ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದೇವೆ. ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದಕ್ಕೆ ಕಾರಣಗಳನ್ನು ಹುಡುಕುತ್ತಿದ್ದೇವೆ’ ಎಂದು ಹೇಳುತ್ತಾರೆ ಬಿಬಿಎಂಪಿ ಜಂಟಿ ಆಯುಕ್ತಸರ್ಫಾರಾಜ್ ಖಾನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.