
ಬೆಂಗಳೂರು: ಕಾಳೇನ ಅಗ್ರಹಾರ–ನಾಗವಾರ ಸಂಪರ್ಕಿಸುವ ನಮ್ಮ ಮೆಟ್ರೊ ಗುಲಾಬಿ ಮಾರ್ಗಕ್ಕಾಗಿ ಬಿಇಎಂಎಲ್ ಪ್ರೊಟೊ ಟೈಪ್ ಚಾಲಕ ರಹಿತ ಎಂಜಿನ್ನ ರೈಲು ಕೋಚ್ಗಳನ್ನು ನಿರ್ಮಿಸುತ್ತಿದ್ದು, ಅದರ ಮೊದಲ ರೈಲನ್ನು ಡಿ.11ಕ್ಕೆ ಬಿಡುಗಡೆ ಮಾಡಲಿದೆ.
ಗುಲಾಬಿ ಮಾರ್ಗವು 21.26 ಕಿ.ಮೀ. ಉದ್ದ ಹೊಂದಿದ್ದು, ಅದರಲ್ಲಿ 13.76 ಕಿ.ಮೀ. ಸುರಂಗ ಮಾರ್ಗವಾಗಿದೆ. ಭೂಗತ ಮಾರ್ಗದಲ್ಲಿ 12 ನಿಲ್ದಾಣಗಳು ಹಾಗೂ ಎತ್ತರಿಸಿದ ಮಾರ್ಗದಲ್ಲಿ 6 ನಿಲ್ದಾಣಗಳು ನಿರ್ಮಾಣಗೊಂಡಿವೆ. ತಾವರೆಕೆರೆಯಿಂದ ಕಾಳೇನ ಅಗ್ರಹಾರದವರೆಗೆ 7.5 ಕಿ.ಮೀ. ಉದ್ದದ ಎತ್ತರಿಸಿದ ಮಾರ್ಗದಲ್ಲಿ ಸಿವಿಲ್ ಕಾಮಗಾರಿಗಳು, ಹಳಿ ಅಳವಡಿಕೆ ಸಹಿತ ಬಹುತೇಕ ಕಾರ್ಯಗಳು ಪೂರ್ಣಗೊಂಡಿವೆ. ತಾಂತ್ರಿಕ ಕೆಲಸಗಳಷ್ಟೇ ಬಾಕಿ ಉಳಿದಿದೆ. ಎತ್ತರಿಸಿದ ಮಾರ್ಗದಲ್ಲಿ 2026ರ ಮೇ ಅಥವಾ ಜೂನ್ ತಿಂಗಳಲ್ಲಿ ಸಂಚಾರ ಆರಂಭಿಸುವ ಗುರಿಯನ್ನು ಬಿಎಂಆರ್ಸಿಎಲ್ ಹೊಂದಿದೆ.
‘ಕಾಳೇನ ಅಗ್ರಹಾರ–ತಾವರೆಕೆರೆ ಮಧ್ಯೆ ಮೆಟ್ರೊ ರೈಲು ಸಂಚಾರ ಆರಂಭಿಸುವಾಗ 6–7 ರೈಲು ಕೋಚ್ಗಳು ಇರಬೇಕಾಗುತ್ತದೆ. ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ರೈಲುಗಳನ್ನು ಪೂರೈಸಲಿದ್ದು, ಮೊದಲ ರೈಲು ತಯಾರಾಗಿದೆ. ಹೊಸ ತಿಪ್ಪಸಂದ್ರದಲ್ಲಿರುವ ಬಿಇಎಂಎಲ್ನಿಂದ 20 ಕಿ.ಮೀ. ದೂರದಲ್ಲಿರುವ ಕೊತ್ತನೂರು ಡಿಪೊಗೆ ಒಯ್ಯಲಾಗುವುದು. ಆನಂತರ ಬೋಗಿಗಳನ್ನು ಜೋಡಣೆ ಮಾಡಿ ವಿವಿಧ ಪರೀಕ್ಷೆಗಳನ್ನು ನಡೆಸಲಾಗುವುದು’ ಎಂದು ಬಿಎಂಆರ್ಸಿಎಲ್ ಅಧಿಕಾರಿ ರಮಾನಂದ್ ಮಾಹಿತಿ ನೀಡಿದರು.
ಗುಲಾಬಿ ಮಾರ್ಗಕ್ಕೆ 16 ಕೋಚ್ ಮತ್ತು ನೀಲಿ ಮಾರ್ಗಕ್ಕೆ 37 ಕೋಚ್ಗಳನ್ನು ₹3,177 ಕೋಟಿಯಲ್ಲಿ ಪೂರೈಸಲು ಬಿಎಂಆರ್ಸಿಎಲ್– ಬಿಇಎಂಎಲ್ ನಡುವೆ 2023ರಲ್ಲಿ ಒಪ್ಪಂದವಾಗಿತ್ತು. 2025ರ ಡಿಸೆಂಬರ್ ಒಳಗೆ 20 ಕೋಚ್ಗಳನ್ನು ಪೂರೈಸುವುದಾಗಿ ಬಿಇಎಂಎಲ್ ವ್ಯವಸ್ಥಾಪಕ ನಿರ್ದೇಶಕ ಶಾಂತನು ರಾಯ್ ಭರವಸೆ ನೀಡಿದ್ದರು. ಸದ್ಯ ಒಂದು ರೈಲು ಪೂರೈಕೆಯಾಗುತ್ತಿದೆ. ಹೆಚ್ಚುವರಿಯಾಗಿ ಗುಲಾಬಿ ಮಾರ್ಗಕ್ಕೆ ಏಳು ಕೋಚ್ ಪೂರೈಸಲು ₹405 ಕೋಟಿಯ ಒಪ್ಪಂದವನ್ನೂ ಬಿಇಎಂಎಲ್ ಮಾಡಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.