ADVERTISEMENT

ನಕಲಿ ಟಿಕೆಟ್‌ ಬಳಸಿ ಬೆಂಗಳೂರು ವಿಮಾನ ನಿಲ್ದಾಣ ಪ್ರವೇಶ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 23:54 IST
Last Updated 13 ಮಾರ್ಚ್ 2024, 23:54 IST
<div class="paragraphs"><p> ಬಂಧನ</p></div>

ಬಂಧನ

   

ಬೆಂಗಳೂರು: ನಕಲಿ ಟಿಕೆಟ್‌ ಬಳಸಿ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸಿದ ಆರೋಪಿಯನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಾರ್ಖಂಡ್‌ನ ಪ್ರಖರ್‌ ಶ್ರೀವಾಸ್ತವ (24) ಬಂಧಿತ ಆರೋಪಿ.

ADVERTISEMENT

‘ಆರೋಪಿಯ ಸ್ನೇಹಿತೆ ಬೆಂಗಳೂರಿಗೆ ಬಂದಿದ್ದರು. ಆಕೆಯನ್ನು ವಿಮಾನದ ಮೂಲಕ ದೆಹಲಿಗೆ ವಾಪಸ್‌ ಕಳುಹಿಸಲು ಆರೋಪಿ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಭದ್ರತಾ ಸಿಬ್ಬಂದಿಗೆ ನಕಲಿ ಟಿಕೆಟ್‌ ಅನ್ನು ತೋರಿಸಿ, ವಿಮಾನ ನಿಲ್ದಾಣ ಪ್ರವೇಶಿಸಿದ್ದ. ಸ್ನೇಹಿತೆಯನ್ನು ಬೀಳ್ಕೊಟ್ಟು ವಾಪಸ್‌ ಬರುತ್ತಿದ್ದ ವೇಳೆ ಅನುಮಾನಗೊಂಡ ಗೇಟ್‌ ನಂ.9ರ ಭದ್ರತಾ ಸಿಬ್ಬಂದಿ, ಟಿಕೆಟ್‌ ಪರಿಶೀಲಿಸಿದ್ದಾರೆ. ಆಗ ನಕಲಿ ಟಿಕೆಟ್‌ ಎಂಬುದು ಗೊತ್ತಾಗಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಯೇ ನಕಲಿ ಟಿಕೆಟ್‌ ತಯಾರಿಸಿಕೊಂಡು ಬಂದಿದ್ದ. ವಿಮಾನ ನಿಲ್ದಾಣದ ಒಳಕ್ಕೆ ಅತಿಕ್ರಮಣ ಪ್ರವೇಶ, ನಕಲಿ ಟಿಕೆಟ್​ ಮತ್ತು ವಂಚನೆ ಪ್ರಕರಣದ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು. ಕಳೆದ ವರ್ಷ ಸಹ ಇದೇ ರೀತಿಯಲ್ಲಿ ವ್ಯಕ್ತಿಯೊಬ್ಬ ನಕಲಿ ಟಿಕೆಟ್‌ ಬಳಸಿ ವಿಮಾನ ನಿಲ್ದಾಣ ಪ್ರವೇಶಿಸಿದ್ದ.

ಬೇರೊಬ್ಬರ ಪಾಸ್‌ಪೋರ್ಟ್‌ ಬಳಕೆ:

ಬೇರೊಬ್ಬರ ಹೆಸರಿನಲ್ಲಿದ್ದ ಪಾಸ್‌ಪೋರ್ಟ್‌ ಬಳಸಿ ವಿಮಾನದಲ್ಲಿ ಪ್ರಯಾಣಿಸಲು ಬಂದಿದ್ದ ಆರೋಪಿಯನ್ನೂ ಪೊಲೀಸರು ಬಂಧಿಸಿದ್ದಾರೆ.

ಶ್ರೇಯಸ್‌ ರಮಾನಂದ್‌ ಬಂಧಿತ ಆರೋಪಿ.

‘ಆರೋಪಿ, ಬೆಂಗಳೂರು ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿ ಅಲ್ಲಿಂದ ಅಲ್ಮೇಟಿಗೆ ಪ್ರಯಾಣಿಸಲು ಬಂದಿದ್ದ. ಇಂಡಿಗೊ ಏರ್‌ಲೈನ್ಸ್‌ ಸಿಬ್ಬಂದಿ ಪರಿಶೀಲನೆ ವೇಳೆ ಪಾಸ್‌ಪೋರ್ಟ್‌ನಲ್ಲಿದ್ದ ಭಾವಚಿತ್ರಕ್ಕೂ ಆರೋಪಿಯ ಮುಖಕ್ಕೂ ಹೋಲಿಕೆ ಕಾಣಿಸುತ್ತಿರಲಿಲ್ಲ. ಏರ್‌ಲೈನ್ಸ್‌ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ರಮಾನಂದ್ ಮತ್ತಿಗೋಡು ಸತ್ಯನಾರಾಯಣ ಎಂಬುವರ ಪಾಸ್‌ಪೋರ್ಟ್‌ ಅನ್ನು ಆರೋಪಿ ಬಳಸಿಕೊಂಡು ವಿಮಾನದಲ್ಲಿ ಪ್ರಯಾಣಿಸಲು ಮುಂದಾಗಿದ್ದ. ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.