ADVERTISEMENT

ಬೆಂಗಳೂರು | ಅಧಿಕ ದರ ವಸೂಲಿ: 114 ಆಟೊಗಳ ಮುಟ್ಟುಗೋಲು

ಒಂದೇ ದಿನ 299 ಪ್ರಕರಣ ದಾಖಲಿಸಿಕೊಂಡ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 15:24 IST
Last Updated 30 ಜೂನ್ 2025, 15:24 IST
ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಆಟೊಗಳ ಪ್ರಯಾಣ ದರ ಪರಿಶೀಲಿಸಿದರು
ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಆಟೊಗಳ ಪ್ರಯಾಣ ದರ ಪರಿಶೀಲಿಸಿದರು   

ಬೆಂಗಳೂರು: ಪ್ರಯಾಣಿಕರಿಂದ ಅಧಿಕ ದರ ವಸೂಲಿ ಮಾಡುತ್ತಿರುವ ಆಟೊಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯನ್ನು ಸೋಮವಾರ ಆರಂಭಿಸಿರುವ ಸಾರಿಗೆ ಕಚೇರಿ ಅಧಿಕಾರಿಗಳು, ಒಂದೇ ದಿನ 299 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 114 ಆಟೊಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಬೆಂಗಳೂರು ಕೇಂದ್ರ, ಬೆಂಗಳೂರು ಪಶ್ಚಿಮ, ಬೆಂಗಳೂರು ಪೂರ್ವ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಜ್ಞಾನಭಾರತಿ, ದೇವನಹಳ್ಳಿ, ಯಲಹಂಕ, ಎಲೆಕ್ಟ್ರಾನಿಕ್‌ ಸಿಟಿ, ಕೆ.ಆರ್‌. ಪುರ, ಚಂದಾಪುರ, ನೆಲಮಂಗಲ, ರಾಮನಗರ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.

ಉಬರ್‌ ಇಂಡಿಯಾ ಸಿಸ್ಟಮ್ಸ್‌ ಪ್ರೈವೇಟ್‌ ಲಿಮಿಟೆಡ್‌, ರೊಪ್ಪೆನ್‌ ಟ್ರಾನ್ಸ್‌ಪೋರ್ಟೇಶನ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌ (ರ‍್ಯಾಪಿಡೊ), ಎಎನ್‌ಐ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ (ಓಲಾ) ಮುಂತಾದ ಕಂಪನಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೈಕ್‌ ಟ್ಯಾಕ್ಸಿಗಳನ್ನು ಹೈಕೋರ್ಟ್‌ನ ಆದೇಶದಂತೆ ಸಾರಿಗೆ ಇಲಾಖೆ ಸ್ಥಗಿತಗೊಳಿಸಿತ್ತು.

ADVERTISEMENT

ಈ ಪರಿಸ್ಥಿತಿಯಲ್ಲಿ ಪ್ರಯಾಣಿಕರಿಂದ ಅಧಿಕ ದರ ವಸೂಲಿ ಮಾಡುವ ಮೂಲಕ ಲಾಭ ಪಡೆಯಲು ಅಗ್ರಿಗೇಟರ್ ಸಂಸ್ಥೆಗಳು ಮತ್ತು ಇತರ ಆಟೊಗಳು ಮುಂದಾಗಿದ್ದವು. ಮೂರ್ನಾಲ್ಕು ಪಟ್ಟು ದರ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಅಂಥ ಆಟೊಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಈ ಸೂಚನೆಯಂತೆ ಸಾರಿಗೆ ಇಲಾಖೆ (ಪ್ರವರ್ತನ) ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ ನೇತೃತ್ವದಲ್ಲಿ ಸೋಮವಾರ ವಿವಿಧ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.

ಸುಲಿಗೆ ಮಾಡುತ್ತಿರುವ ಅಗ್ರಿಗೇಟರ್‌ಗಳು: ಪಿ.ಸಿ. ಮೋಹನ್

ಡಿಜಿಟಲ್‌ ಏಕಸ್ವಾಮ್ಯ ಸಾಧಿಸಿರುವ ಅಗ್ರಿಗೇಟರ್‌ ಸಂಸ್ಥೆಗಳು ಪ್ರಯಾಣಿಕರನ್ನು ಲೂಟಿ ಮಾಡುತ್ತಿವೆ. ಅವುಗಳ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಸಾರಿಗೆ ಇಲಾಖೆ ವಿಫಲವಾಗಿದೆ ಎಂದು ಸಂಸದ ಪಿ.ಸಿ. ಮೋಹನ್‌ ತಿಳಿಸಿದ್ದಾರೆ. 1.9 ಕಿ.ಮೀ.ಗೆ ರಾಜ್ಯ ಸರ್ಕಾರ ನಿಗದಿ ಮಾಡಿರುವ ದರ ₹30 ಮತ್ತು ಆ ನಂತರದ ಪ್ರತಿ ಕಿಲೋಮೀಟರ್‌ಗೆ ₹ 15. ಈ ಪ್ರಕಾರ 3.5 ಕಿ.ಮೀ.ಗೆ ₹54 ಆಗುತ್ತದೆ. ಆದರೆ ಖಾಸಗಿ ಅಗ್ರಿಗೇಟರ್‌ಗಳು ₹ 105 ವಿಧಿಸುತ್ತಿದ್ದಾರೆ ಎಂದು ಅವರು ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ. ಕರ್ನಾಟಕ ಹೈಕೋರ್ಟ್ 2024ರ ಮೇ ತಿಂಗಳಲ್ಲಿ ಆಟೊ ದರಗಳಿಗೆ ಮಿತಿ ವಿಧಿಸಿತ್ತು. ಅಗ್ರಿಗೇಟರ್‌ಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾನೂನನ್ನು ಉಲ್ಲಂಘಿಸಿದ್ದಾರೆ. ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು. ಅಕ್ರಮ ಪರವಾನಗಿಗಳನ್ನು ರದ್ದುಗೊಳಿಸಬೇಕು. ಅಗ್ರಿಗೇಟರ್ ಪರವಾನಗಿಗಳನ್ನು ರದ್ದುಗೊಳಿಸಬೇಕು. ಪ್ರಯಾಣಿಕರನ್ನು ಶೋಷಣೆಯಿಂದ ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಂಕಿ ಅಂಶ (ಆರ್‌ಟಿಒ; ದಾಖಲಿಸಿದ ಪ್ರಕರಣಗಳು‌; ಮುಟ್ಟುಗೋಲು ಹಾಕಿಕೊಂಡ ವಾಹನಗಳು)

ಬೆಂಗಳೂರು ಕೇಂದ್ರ;30;19

ಬೆಂಗಳೂರು ಪಶ್ಚಿಮ;36;13

ಬೆಂಗಳೂರು ಪೂರ್ವ;30;05

ಬೆಂಗಳೂರು ಉತ್ತರ;25;03

ಬೆಂಗಳೂರು ದಕ್ಷಿಣ;48;18

ಜ್ಞಾನಭಾರತಿ;18;16

ದೇವನಹಳ್ಳಿ;6;2

ಯಲಹಂಕ;11;5

ಎಲೆಕ್ಟ್ರಾನಿಕ್‌ ಸಿಟಿ;26;8

ಕೆ.ಆರ್‌.ಪುರ;19;5

ಚಂದಾಪುರ;11;04

ನೆಲಮಂಗಲ;30;12

ರಾಮನಗರ;9;4

ಒಟ್ಟು;299;114

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.