ಬೆಂಗಳೂರು:ಮಲ್ಲೇಶ್ವರ ಕ್ಷೇತ್ರ ವ್ಯಾಪ್ತಿಯ ವಾರ್ಡ್ 45ರ ಪಟೇಲ್ ಭೈರಹನುಮಯ್ಯ ಕೊಳೆಗೇರಿ ಫಲಾನುಭವಿಗಳಿಗೆ ಬಹುಮಹಡಿಯಲ್ಲಿ ಕಟ್ಟಲಾಗಿರುವ 60 ಮನೆಗಳನ್ನು ಹಸ್ತಾಂತರಿಸುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಚಾಲನೆ ನೀಡಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜಯಂತ್ಯುತ್ಸವದ ಅಂಗವಾಗಿ ಬಿಬಿಎಂಪಿ ವತಿಯಿಂದ ಯಶವಂತಪುರದ ಸಂವಿಧಾನ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ₹ 5.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 60 ಮನೆಗಳ ಬಹುಮಹಡಿ ಕಟ್ಟಡದ ಉದ್ಘಾಟನೆ ನೆರವೇರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಶಾಸಕರೂ ಆದ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ’ನಮ್ಮ ಸರ್ಕಾರ, ಅಂಬೇಡ್ಕರ್ ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ನಡೆದು ದುರ್ಬಲ ವರ್ಗದವರನ್ನು ಸಬಲೀಕರಿಸಲು ಹೆಚ್ಚಿನ ಒತ್ತು ನೀಡುತ್ತಿದೆ’ ಎಂದರು.
‘ಮಲ್ಲೇಶ್ವರ ಕ್ಷೇತ್ರದಲ್ಲಿರುವ ಎಲ್ಲಾ 13 ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣ
ಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಸಂಸದ ಡಿ.ವಿ.ಸದಾನಂದ ಗೌಡರ ಒತ್ತಾಸೆ
ಯಿಂದ ಜನೌಷಧಿ ಕೇಂದ್ರಗಳ ಸ್ಥಾಪನೆ ಮೂಲಕ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಉತ್ತಮಗೊಳಿಸಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಡಿಜಿಟಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು ಯೋಜಿಸಲಾಗುತ್ತಿದೆ’ ಎಂದರು.
’ಕರಿಮಂಡಿ ಕೊಳೆಗೇರಿಯಲ್ಲಿ 36 ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲ್ (ಯಶವಂತಪುರ ಮಾರ್ಕೆಟ್ ಪಕ್ಕ) ಕೊಳೆಗೇರಿ ಪ್ರದೇಶದಲ್ಲಿ 35 ಮನೆಗಳನ್ನು ಕಟ್ಟಲಾಗಿದೆ. ಸಿದ್ಧಾರ್ಥ ಕೊಳೆಗೇರಿಯಲ್ಲಿ 100 ಒಂಟಿ ಮನೆಗಳನ್ನು ಕಟ್ಟಲಾಗಿದೆ. ಎನ್ಎಚ್ ಕಾಲೋನಿಯಲ್ಲಿ ನೂರಕ್ಕೂ ಹೆಚ್ಚು ಮನೆಗಳಿವೆ. ಈಗ ಪಟೇಲ್ ಭೈರಹನುಮಯ್ಯ ಕೊಳೆಗೇರಿಯಲ್ಲಿ 60 ಮನೆಗಳನ್ನು ಕಟ್ಟಲಾಗಿದ್ದು, ಇನ್ನೂ 60 ಮನೆಗಳಿರುವ ಕಟ್ಟಡ ನಿರ್ಮಾಣಕ್ಕೆ ಇಂದು ಚಾಲನೆ ನೀಡಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.