ADVERTISEMENT

ಬೆಂಗಳೂರು | ವಿದ್ಯುತ್‌ ಅದಾಲತ್‌: ಬೇಡಿಕೆಗಳ ಮಹಾಪೂರ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 19:04 IST
Last Updated 18 ಜೂನ್ 2022, 19:04 IST
   

ಬೆಂಗಳೂರು: ಗ್ರಾಮೀಣ ಭಾಗದ ವಿದ್ಯುತ್‌ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಬೆಸ್ಕಾಂ ವ್ಯಾಪ್ತಿಯ 104 ಗ್ರಾಮಗಳಲ್ಲಿ ಶನಿವಾರ ನಡೆದ ಮೊದಲ ವಿದ್ಯುತ್‌ ಅದಾಲತ್‌ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು‌.

ಗ್ರಾಹಕರು ವಿದ್ಯುತ್‌ ಸಂಬಂಧಿತ ಸಮಸ್ಯೆಗಳ ಕುರಿತು ಹಿರಿಯ ಅಧಿಕಾರಿಗಳ ಗಮನ ಸೆಳೆದರು.

ಹೊಸ ಪರಿವರ್ತಕಗಳು, ಹೆಚ್ಚುವರಿ ವಿದ್ಯುತ್‌ ಕಂಬಗಳು, ಹೊಸ ವಿದ್ಯುತ್‌ ಸಂಪರ್ಕ, ಗುಣಮಟ್ಟದ ವಿದ್ಯುತ್‌ ಪೂರೈಕೆ, ಹಳೇ ಲೈನ್‌ ಬದಲಾವಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಗ್ರಾಹಕರು ಬೆಸ್ಕಾಂ ಅಧಿಕಾರಿಗಳ ಮುಂದಿಟ್ಟರು.

ADVERTISEMENT

ಬಿಲ್ಲಿಂಗ್‌, ವಿದ್ಯುತ್‌ ವ್ಯತ್ಯಯ, ಹೊಸ ಸಂಪರ್ಕ, ಹೊಸ ವಿದ್ಯುತ್‌ ಪರಿವರ್ತಕ, ಎಲ್‌ಟಿ ಲೈನ್‌ ಬೇಡಿಕೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಗ್ರಾಹಕರು ಅದಾಲತ್‌ನಲ್ಲಿ ಗಮನ ಸೆಳೆದರು ಎಂದು ಅಧಿಕಾರಿಗಳು ತಿಳಿಸಿದರು.

ಸುಮಾರು 150 ಮಂದಿ ಅದಾಲತ್‌ನಲ್ಲಿ ಭಾಗವಹಿಸಿದ್ದರು. ಹೊಸ ವಿದ್ಯುತ್‌ ಸಂಪರ್ಕಗಳಿಗೆ ಗ್ರಾಹಕರಿಂದ ಬೇಡಿಕೆ ವ್ಯಕ್ತವಾಯಿತು. ಬೆಳಕು ಯೋಜನೆ ಮತ್ತಿತರ ಬೆಸ್ಕಾಂ ವಿದ್ಯುತ್‌ ಯೋಜನೆಗಳಿಗೆ ಗ್ರಾಹಕರು ನಿರ್ದೇಶಕರಿಗೆ ಬೇಡಿಕೆ ಸಲ್ಲಿಸಿದರು.

ಅದಾಲತ್‌ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಸ ವಿದ್ಯುತ್‌ ಸಂಪರ್ಕಕಕ್ಕೆ ಅರ್ಜಿ ಸಲ್ಲಿಸಿರುವ ಗ್ರಾಹಕರಿಗೆ ಶೀಘ್ರ ವಿದ್ಯುತ್‌ ಸಂಪರ್ಕ ನೀಡುವ ಭರವಸೆ ನೀಡಲಾಗಿದೆ ಎಂದು ಬೆಸ್ಕಾಂ ನಿರ್ದೇಶಕ ಡಿ. ನಾಗಾರ್ಜನ ಚಿಂತಾಮಣಿ ತಿಳಿಸಿದರು.‌

ಚಂದಾಪುರದ ವೀರಸಂದ್ರ ಉಪ ವಿಭಾಗದ ಮುತ್ತನಲ್ಲೂರಿನಲ್ಲಿ ನಡೆದ ಅದಾಲತ್‌ನಲ್ಲಿ ಭಾಗವಹಿಸಿದ್ದ ಗ್ರಾಹಕರು, ನೀರು ಸಂಪರ್ಕ ಮತ್ತು ಮನೆಗಳ ವಿದ್ಯುತ್‌ ಸಂಪರ್ಕಕ್ಕೆ ಒದಗಿಸಿರುವ ವಿದ್ಯುತ್‌ ಪರಿವರ್ತಕದ ಲೋಡ್‌ ಸಾಮರ್ಥ್ಯ ಹೆಚ್ಚಿಸುವಂತೆ ಬೆಸ್ಕಾಂನ ಪ್ರಧಾನ ವ್ಯವಸ್ಥಾಪಕ (ಗ್ರಾಹಕ ಸಂಪರ್ಕ) ಎಸ್.ಆರ್.ನಾಗರಾಜಗೆ ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.