ADVERTISEMENT

ಬೆಂಗಳೂರು | ಅಡಿಗಡಿಗೂ ಲಂಚ: ಕಠಿಣ ಕ್ರಮದ ಭರವಸೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 23:30 IST
Last Updated 31 ಅಕ್ಟೋಬರ್ 2025, 23:30 IST
<div class="paragraphs"><p>ಜಿಬಿಎ</p></div>

ಜಿಬಿಎ

   

ಬೆಂಗಳೂರು: ಪುತ್ರಿಯ ಮೃತದೇಹ ಸಾಗಿಸಲು, ಮರಣೋತ್ತರ ಪರೀಕ್ಷೆ, ಆಂಬುಲೆನ್ಸ್‌ ಚಾಲಕ, ಪೊಲೀಸರು, ಸ್ಮಶಾನದ ಸಿಬ್ಬಂದಿ ಹಾಗೂ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳಿಂದ ಅನುಭವಿಸಿದ ನೋವು ಹಾಗೂ ಸಿಬ್ಬಂದಿ ಹಣಕ್ಕೆ ಬೇಡಿಕೆಯಿಟ್ಟಿರುವ ಬಗ್ಗೆ ಭಾರತ್ ಪೆಟ್ರೋಲಿಯಂ ನಿಗಮದ ನಿವೃತ್ತ ಸಿಎಫ್​ಒ ಕೆ.ಶಿವಕುಮಾರ್ ‘ಲಿಂಕ್ಡ್​​ಇನ್‌’ನಲ್ಲಿ ಮಾಡಿರುವ ಆರೋಪಕ್ಕೆ ಸಂಬಂಧಿಸಿ, ಗೃಹ ಸಚಿವ ಪರಮೇಶ್ವರ, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಸೇವೆಯಿಂದ ವಜಾ: ಪರಮೇಶ್ವರ

‘ಕೆ. ಶಿವಕುಮಾರ್‌ ಅವರ ಮಗಳ ಸಾವಿನ ಪ್ರಕರಣದಲ್ಲಿ ಪೊಲೀಸ್‌ ಇಲಾಖೆಯಲ್ಲಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಲಂಚ ಪಡೆದಿರುವುದು ಸಾಬೀತಾದರೆ ಅವರನ್ನು ಸೇವೆಯಿಂದಲೇ ವಜಾ ಮಾಡಲಾಗುತ್ತದೆ’ ಎಂದು ಗೃಹ ಸಚಿವ ಪರಮೇಶ್ವರ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಸಾವಿರ ಇರಲಿ, ಐನೂರು ರೂಪಾಯಿಯೇ ಆಗಿರಲಿ, ಪೊಲೀಸರು ಲಂಚ ಪಡೆದಿದ್ದರೆ ಕೂಡಲೇ ಅಮಾನತು ಮಾಡಿ ಇಲಾಖಾ ವಿಚಾರಣೆ ನಡೆಸಲಾಗುವುದು. ತನಿಖೆಯಲ್ಲಿ ಲಂಚ ಪಡೆದಿರುವುದು ಸಾಬೀತಾದರೆ ಸೇವೆಯಿಂದ ವಜಾ ಮಾಡಲಾಗುತ್ತದೆ. ಭ್ರಷ್ಟಾಚಾರವನ್ನು ಸರ್ಕಾರ ಸಹಿಸುವುದಿಲ್ಲ’ ಎಂದಿದ್ದಾರೆ.

ನಿರ್ದಿಷ್ಟ ದೂರು ನೀಡಿಲ್ಲ: ಮಹೇಶ್ವರ್‌ ರಾವ್‌

‘ಭಾರತ್ ಪೆಟ್ರೋಲಿಯಂ ನಿಗಮದ ನಿವೃತ್ತ ಸಿಎಫ್​ಒ ಕೆ.ಶಿವಕುಮಾರ್ ಅವರು ನನಗೆ ಪರಿಚಿತರು. ಅವರೊಂದಿಗೆ ನಾನು ಮಾತನಾಡಿದ್ದೇನೆ. ಅವರು ಮಗಳನ್ನು ಕಳೆದುಕೊಂಡು ತೀವ್ರ ದುಃಖದಲ್ಲಿದ್ದಾರೆ. ವ್ಯವಸ್ಥೆಯಲ್ಲಿ ಸಮಸ್ಯೆ ಇದೆ. ಇಡೀ ವ್ಯವಸ್ಥೆಯನ್ನು ಸರಿ ಮಾಡಬೇಕು ಎಂದು ಹೇಳಿದ್ದಾರೆ. ಹೆಚ್ಚಿನ ಮಾತುಕತೆ ಮಾಡಲು ಸಾಧ್ಯವಾಗಿಲ್ಲ’ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಹೇಳಿದರು.

ಮರಣ ಪ್ರಮಾಣಪ‍ತ್ರಕ್ಕೂ ಲಂಚ ನೀಡಬೇಕು ಎಂಬ ಶಿವಕುಮಾರ್‌ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಮಹೇಶ್ವರ್‌ ರಾವ್‌, ‘ಪೂರ್ವ ನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಪಾಲಿಕೆಯಲ್ಲಿ ಯಾವ ರೀತಿ ವಿಳಂಬವಾಗಿದೆ? ಯಾರು ತೊಂದರೆ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ತಪ್ಪು ಮಾಡಿರುವುದು ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಸುಲಿಗೆ ಟಾರ್ಗೆಟ್‌ ಎಷ್ಟು?: ಅಶೋಕ

‘ಕಾಂಗ್ರೆಸ್ ಹೈಕಮಾಂಡ್‌ ಮತ್ತು ರಾಹುಲ್‌ ಗಾಂಧಿ ಅವರ ಜೋಳಿಗೆ ತುಂಬಿಸಿ,  ಸಿ.ಎಂ ಕುರ್ಚಿ ಗಿಟ್ಟಿಸಿಕೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಎಷ್ಟು ಸುಲಿಗೆ ಟಾರ್ಗೆಟ್‌ ಕೊಟ್ಟಿದ್ದೀರಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರೇ’ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಅವರು ‘ಎಕ್ಸ್‌’ನಲ್ಲಿ ಪ್ರಶ್ನಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ ‘ಅಂತ್ಯಸಂಸ್ಕಾರಕ್ಕೆ ಅಡಿಗಡಿಗೂ ಲಂಚ’ ಸುದ್ದಿಯನ್ನು ಉಲ್ಲೇಖಿಸಿರುವ ಅವರು, ‘ಮರಣೋತ್ತರ ಪರೀಕ್ಷೆ ವರದಿ ಪಡೆಯಲು ಲಂಚ, ಮರಣ ಪ್ರಮಾಣಪತ್ರ ಪಡೆಯಲು ಲಂಚ, ಅಂತ್ಯ ಸಂಸ್ಕಾರ ಮಾಡೋದಕ್ಕೆ ಲಂಚ. ನಿಮ್ಮ ಕುರ್ಚಿ ಆಸೆಗೆ ಜನಸಾಮಾನ್ಯರ ರಕ್ತ ಇನ್ನೆಷ್ಟು ಹೀರುತ್ತೀರಿ ಉಪ ಮುಖ್ಯಮಂತ್ರಿಯವರೇ?’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.