
ಸಂಚಾರ ದಟ್ಟಣೆ (ಸಂಗ್ರಹ ಚಿತ್ರ)
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ– 1 ಬಿಬಿಸಿ) ಯೋಜನೆಯು ಉತ್ತರ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎಂದು ಬಿಬಿಸಿ ವಿಶೇಷ ಉದ್ದೇಶದ ಘಟಕ (ಎಸ್ಪಿವಿ) ಅಧ್ಯಕ್ಷ ಎಲ್.ಕೆ.ಅತೀಕ್ ಹೇಳಿದ್ದಾರೆ.
ಯೋಜನೆಗೆ ಭೂಮಿ ನೀಡುವ ರೈತರಿಗೆ ಐದು ಪರಿಹಾರ ಆಯ್ಕೆಗಳನ್ನು ನೀಡಲಾಗಿದೆ. ರಾಜ್ಯದ ಯಾವುದೇ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಹಿಂದೆಂದೂ ನೀಡದಂತಹ ವಿಸ್ತೃತ ಆಯ್ಕೆಗಳಾಗಿವೆ. ನವೆಂಬರ್ನಲ್ಲಿ ರೈತರಿಗೆ ಈ ಆಯ್ಕೆಗಳ ಬಗ್ಗೆ ವಿವರವಾಗಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಯೋಜನೆಗೆ 2,418 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದ್ದು, ಸುಮಾರು 5 ಸಾವಿರ ಕುಟುಂಬಗಳು ಮಾತ್ರ ಪೂರ್ಣ ಅಥವಾ ಭಾಗಶಃ ಭೂಮಿಯನ್ನು ಕಳೆದುಕೊಳ್ಳಲಿವೆ. ಎಲ್ಎಕ್ಯೂ ಮತ್ತು ಆರ್ಆರ್ 2013ರ ಕಾಯ್ದೆ ಪ್ರಕಾರ ನಗದು ಪರಿಹಾರ ಪಾವತಿಸಲಾಗುವುದು. ನಗರದ ಪ್ರದೇಶದಲ್ಲಿ ಪ್ರಸ್ತುತ ಮಾರ್ಗಸೂಚಿ ದರದ ಎರಡು ಪಟ್ಟು ಮತ್ತು ಗ್ರಾಮೀಣ ಪ್ರದೇಶದಲ್ಲಿ ಮೂರು ಪಟ್ಟು ನೀಡಲಾಗುವುದು. 2013ರ ಕಾಯ್ದೆಯಡಿ ಪರಿಹಾರ ನೀಡುವ ಬೇಡಿಕೆ ನ್ಯಾಯಯುತವಾಗಿದ್ದು, ಭೂಮಾಲೀಕರು ಮತ್ತು ಕೆಲವು ರೈತ ಸಂಘಟನೆಗಳೊಂದಿಗೆ ಮಾತುಕತೆ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.
ನಗದು ಪರಿಹಾರ ಸಾಕಾಗದಿದ್ದರೆ, ಅಭಿವೃದ್ಧಿಪಡಿಸಿದ ವಾಣಿಜ್ಯ/ವಸತಿ ಭೂಮಿ, ಟಿಡಿಆರ್ (ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು) ಅಥವಾ ಎಫ್ಎಆರ್ಗಾಗಿ ಆಯ್ಕೆ ಮಾಡಬಹುದು. ಈ ಆಸ್ತಿಗಳ ಮೌಲ್ಯವು ಯೋಜನೆಯ ನಂತರ ಹೆಚ್ಚಾಗುತ್ತದೆ ಮತ್ತು ಹೂಡಿಕೆ ಮಾಡದಿದ್ದರೆ ಮೌಲ್ಯ ಕಳೆದುಕೊಳ್ಳುವ ನಗದಿಗಿಂತ ಹೆಚ್ಚು ಲಾಭದಾಯಕ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.