
ಬೆಂಗಳೂರು: ಕಾರು ಚಾಲಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಪ್ರಯಾಣಿಕನನ್ನು ಹೆಣ್ಣೂರು ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಶಿವಾಜಿನಗರದ ನಿವಾಸಿ ಮನ್ಸೂರ್ (37) ಬಂಧಿತ ಆರೋಪಿ.
ಕಾರು ಚಾಲಕ ವಿ.ಕೆ.ಪ್ರದೀಪ್ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಇರಿತಕ್ಕೆ ಒಳಗಾದ ಪ್ರದೀಪ್ ಅವರು ವಸಂತ ನಗರದ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅವರ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರದೀಪ್ ಅವರು ಕಾರನ್ನು ಬಾಡಿಗೆಗೆ ಓಡಿಸುತ್ತಿದ್ದಾರೆ. ನ.13ರಂದು ಮೈಸೂರು ರಸ್ತೆಯ ಬಸ್ ನಿಲ್ದಾಣ ಬಳಿಯ ವಾಹನ ನಿಲುಗಡೆ ಪ್ರದೇಶದಲ್ಲಿ ಕಾರು ನಿಲುಗಡೆ ಮಾಡಿಕೊಂಡಿದ್ದರು. ರಾತ್ರಿ 7.20ರ ಸುಮಾರಿಗೆ ಬಂದಿದ್ದ ಆರೋಪಿ, ಶಿವಾಜಿನಗರಕ್ಕೆ ಹೋಗಬೇಕೆಂದು ಕೇಳಿದ್ದ. ₹3 ಸಾವಿರ ಬಾಡಿಗೆ ನೀಡುವುದಾಗಿ ಆರೋಪಿ ಒಪ್ಪಿಕೊಂಡಿದ್ದ. ಶಿವಾಜಿನಗರಕ್ಕೆ ಬಂದ ಮೇಲೆ ಹೆಗಡೆ ನಗರಕ್ಕೆ ಹೋಗಬೇಕೆಂದು ಹೇಳಿದ್ದ. ಬಾಡಿಗೆ ಹೆಚ್ಚು ಕೊಡುವಂತೆ ಚಾಲಕ ಪ್ರದೀಪ್ ಅವರು ಕೇಳಿದ್ದರು. ಅದಕ್ಕೆ ಒಪ್ಪಿದ್ದ ಬಾಡಿಗೆದಾರ, ಹೆಗಡೆ ನಗರಕ್ಕೆ ತೆರಳಿದ ಮೇಲೆ ಟೆಲಿಕಾಂ ಲೇಔಟ್ಗೆ ಹೋಗಬೇಕೆಂದು ಹೇಳಿದ್ದ. ಅಲ್ಲಿಗೆ ಕರೆದೊಯ್ದ ಮೇಲೆ ಹಣ ಪಾವತಿಸದೇ ಚಾಕುವಿನಿಂದ ಇರಿದು ಆರೋಪಿ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.