ADVERTISEMENT

‌ ಬೆಂಗಳೂರಲ್ಲಿ ಬಾಲಕಿ ಕೊಲೆ: ಒಡಿಶಾದಲ್ಲಿ ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 16:23 IST
Last Updated 8 ಜನವರಿ 2026, 16:23 IST
<div class="paragraphs"><p>ಬಂಧನ</p></div>

ಬಂಧನ

   

ಬೆಂಗಳೂರು: ನಲ್ಲೂರುಹಳ್ಳಿಯ ಕಾರ್ಮಿಕರ ಶೆಡ್‌ ಎದುರು ಆಟವಾಡುತ್ತಿದ್ದ ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ಮಾಡಿ ಮೃತದೇಹವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿ ಎಸೆದು ಪರಾರಿಯಾಗಿದ್ದ ಆರೋಪಿಯನ್ನು ವೈಟ್‌ಫೀಲ್ಡ್ ಠಾಣೆಯ ಪೊಲೀಸರು ಒಡಿಶಾದಲ್ಲಿ ಬಂಧಿಸಿದ್ದಾರೆ.

ಯೂಸುಫ್ ಮೀರ್ ಬಂಧಿತ ಆರೋಪಿ.

ADVERTISEMENT

ಪಶ್ಚಿಮ ಬಂಗಾಳದ ಇಜಾಮುಲ್‌ ಶೇಖ್‌ ಅವರ ಪುತ್ರಿ ಶಹನಾಜ್ ಖಾತುನ್‌ಳನ್ನು ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ.

ಕೆಲವು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ಇಜಾಮುಲ್‌ ಶೇಖ್‌ ಕುಟುಂಬಸ್ಥರು ನಲ್ಲೂರುಹಳ್ಳಿ ಸುತ್ತಮುತ್ತ ಕೂಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಬೆಳಿಗ್ಗೆ ಶೆಡ್ ಎದುರು ಬಾಲಕಿ ಆಟವಾಡುತ್ತಿದ್ದಳು. ಆಗ ಬಾಲಕಿಯ ಅಪಹರಣ ನಡೆದಿತ್ತು. ಮಂಗಳವಾರ ಬೆಳಿಗ್ಗೆ ಪೋಷಕರು ನಾಪತ್ತೆ ದೂರು ದಾಖಲಿಸಿದ್ದರು. ಠಾಣೆಯ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾಗ ದೇವಸ್ಥಾನದ ಪಕ್ಕದ ಕಾಲುವೆಯಲ್ಲಿ ಅದೇ ದಿನ ರಾತ್ರಿ ಮೃತದೇಹ ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದರು.

‘ಪಕ್ಕದ ಮನೆಯ ನಿವಾಸಿಯ ಜತೆಗೆ ಬಾಲಕಿಯ ತಾಯಿ ಇತ್ತೀಚೆಗೆ ಜಗಳವಾಡಿದ್ದರು. ಅದೇ ಸಿಟ್ಟಿನಿಂದ ಯೂಸುಫ್ ಮೀರ್, ಬಾಲಕಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಬಾಲಕಿಯ ಪೋಷಕರು ನೀಡಿದ ದೂರು ಆಧರಿಸಿ ಯೂಸಫ್‌ ಮೀರ್ ಎಂಬಾತನೇ ಕೃತ್ಯ ಎಸಗಿರುವ ಶಂಕೆಯ ಮೇಲೆ ತನಿಖೆ ಆರಂಭಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಖಚಿತ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಸಾಗಿದ್ದ ಮಾರ್ಗವನ್ನು ಪತ್ತೆಹಚ್ಚಲಾಯಿತು. ಒಡಿಶಾಕ್ಕೆ ವಿಶೇಷ ತಂಡವು ತೆರಳಿ ಆರೋಪಿಯನ್ನು ಬಂಧಿಸಿದೆ. ಅಲ್ಲಿನ ನ್ಯಾಯಾಲಯದ ಅನುಮತಿ ಪಡೆದು ಆರೋಪಿಯನ್ನು ನಗರಕ್ಕೆ ಕರೆ ತರಲಾಗಿದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.