ADVERTISEMENT

ಬೆಂಗಳೂರು | ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಮತ್ತೆ ಮೂವರು ಯುವಕರ ಬಂಧನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 15:47 IST
Last Updated 1 ಮಾರ್ಚ್ 2026, 15:47 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಆರೋಪ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಅಮೃತಹಳ್ಳಿ ಠಾಣೆ ಪೊಲೀಸರು, ಮತ್ತೆ ಮೂವರು ಯುವಕರನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ‍್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೇರಿದೆ.

ADVERTISEMENT

19 ವರ್ಷದ ಯುವತಿ ನೀಡಿದ್ದ ದೂರಿನ ಮೇಲೆ ತನಿಖೆ ಕೈಗೊಂಡಿದ್ದ ಪೊಲೀಸರು ಕೃತ್ಯಕ್ಕೆ ಸಹಕರಿಸಿದ‌ ಆರೋಪದಡಿ ಶಿವಮೊಗ್ಗದ ಶ್ರವಣ್ (21), ದಾವಣಗೆರೆಯ ಅನಿರುದ್ಧ್ (33) ಹಾಗೂ ಗುಜರಾತ್‌ನ ಮೋಹಿತ್ ಜೈನ್ (23) ಎಂಬುವವರನ್ನು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಏಳು ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿದೆ. ಕೃತ್ಯಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಕಾರಣ ಮೂವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈಗಾಗಲೇ ಪಶ್ಚಿಮ ಬಂಗಾಳದ ಡಿಕ್ಸನ್ ಸ್ಯಾಂತ್ರಾ (21), ಸಕಲೇಶಪುರದ ನಿಖಿಲ್‌ನನ್ನು (34) ಬಂಧಿಸಲಾಗಿದೆ.

ಫೆಬ್ರುವರಿ 14ರ ರಾತ್ರಿ ಜಕ್ಕೂರಿನಲ್ಲಿರುವ ವಿಲ್ಲಾದಲ್ಲಿ ನಡೆದ ಪಾರ್ಟಿಯಲ್ಲಿ ಅನಿರುದ್ಧ್ ಕೂಡ ಭಾಗಿಯಾಗಿದ್ದ. ಈತ ಕೆಲವು ಪ್ರಭಾವಿಗಳೊಂದಿಗೆ ನಂಟು ಹೊಂದಿದ್ದು, ನಿಖಿಲ್‌ಗೂ ಸ್ನೇಹಿತ. ಪಾರ್ಟಿಯಲ್ಲಿ ಏನೇನು ನಡೆಯಿತು, ಪಾರ್ಟಿಯ ಉದ್ದೇಶ ಏನಾಗಿತ್ತು ಎಂಬುದರ ಕುರಿತು ತನಿಖೆ ನಡೆದಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪಾರ್ಟಿಯಲ್ಲಿ ಭಾಗಿಯಾಗಿದ್ದ ಯುವತಿಯರ ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ಎಷ್ಟು ಪಾರ್ಟಿಗಳನ್ನು ಆಯೋಜಿಸಿದ್ದಾರೆ? ಯಾರ್‍ಯಾರು ಪಾರ್ಟಿಯಲ್ಲಿ ಭಾಗಿಯಾಗಿದ್ದರು? ಫೆಬ್ರುವರಿ 14ರಂದು ನಡೆದ ಪಾರ್ಟಿಯಲ್ಲಿ ಎಷ್ಟು ಮಂದಿ ಇದ್ದರು? ಎಂಬುದರ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು. 

ಪಾರ್ಟಿಯಲ್ಲಿ ಭಾಗಿಯಾಗಿದ್ದ ನಿಖಿಲ್, ಡಿಕ್ಸನ್ ಸಾಂತ್ರಾ, ಸಂತ್ರಸ್ತೆ ಸೇರಿ ಕೆಲವು ಯುವತಿಯರು ಮಾದಕವಸ್ತು ಸೇವನೆ ಮಾಡಿರುವ ಶಂಕೆಯಿದೆ. ಪಾರ್ಟಿಯಲ್ಲಿದ್ದ ಎಂಟು ಮಂದಿಯ ರಕ್ತದ ಮಾದರಿಯನ್ನು ಸಂಗ್ರಹಿಸಿ, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿಯಲ್ಲಿ ಮಾದಕವಸ್ತು ಸೇವನೆ ದೃಢಪಟ್ಟರೆ ಆರೋಪಿಗಳ ವಿರುದ್ಧ ಮಾದಕವಸ್ತು ಮಾರಾಟದ ಆರೋಪದಡಿ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪಾರ್ಟಿ ನಡೆದಿರುವ ವಿಲ್ಲಾ, ಪೊಲೀಸ್ ಅಧಿಕಾರಿಗೆ ಸೇರಿದ್ದು ಎಂಬುದು ಗೊತ್ತಾಗಿದೆ. ಆದರೆ, ಅಧಿಕಾರಿಯು ಕೆಲ ವರ್ಷಗಳ ಹಿಂದೆಯೇ ಕಂಪನಿಯೊಂದಕ್ಕೆ ಗುತ್ತಿಗೆಗೆ ನೀಡಿದ್ದರು. ಆ ಕಂಪನಿ ಮೂಲಕ ನಿಖಿಲ್, ಅನಿರುದ್ಧ್ ವಿಲ್ಲಾ ಬಾಡಿಗೆಗೆ ಪಡೆದಿದ್ದಾರೆ ಎನ್ನಲಾಗಿದೆ. ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇನ್‌ಸ್ಟಾಗ್ರಾಂ ಮೂಲಕ ಆರೋಪಿಗಳು, ಯುವತಿಯರ ಸ್ನೇಹ ಬೆಳೆಸಿ ನಂತರ ಫೋಟೊಶೂಟ್, ಮಾಡೆಲಿಂಗ್ ಹಾಗೂ ಪಾರ್ಟಿ ನೆಪದಲ್ಲಿ ಆಹ್ವಾನಿಸುತ್ತಿದ್ದರು. ಆರಂಭದಲ್ಲಿ ಅವರ ನಂಬಿಕೆ ಗಳಿಸಲು ಪಬ್‌ ಮತ್ತು ಕೆಫೆಗಳಲ್ಲಿ ಭೇಟಿಯಾಗಿ ಸಭ್ಯರಂತೆ ವರ್ತಿಸುತ್ತಿದ್ದರು. ಬಳಿಕ ಸ್ನೇಹ ಮುಂದುವರಿಸಿ ಪಾರ್ಟಿ ನೆಪದಲ್ಲಿ ವಿಲ್ಲಾಗಳಿಗೆ ಕರೆದೊಯ್ಯುತ್ತಿದ್ದರು ಎಂದು ಮೂಲಗಳು ಹೇಳಿವೆ.

ಜಕ್ಕೂರಿನಲ್ಲಿ ನಡೆದ ಪಾರ್ಟಿಯ ವಿಡಿಯೊಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಯುವತಿಯರು ನೃತ್ಯ ಮಾಡುತ್ತಿರುವುದು, ಆರೋಪಿಗಳು ಮದ್ಯ ಸೇವನೆ ಮಾಡುತ್ತಿರುವ ದೃಶ್ಯ ಇದೆ.

‌ಯುವತಿಯ ದೂರಿಗೂ ಮೊದಲೇ ಮಲ್ಲೇಶ್ವರಂ ಠಾಣೆಗೆ ನಿಖಿಲ್ ದೂರು ನೀಡಿದ್ದ. ‘ಫೆಬ್ರುವರಿ 14ರಂದು ಪಾರ್ಟಿಗೆ ಬಂದಿದ್ದ ಯುವತಿ, ಸಲುಗೆಯಿಂದ ವರ್ತಿಸುತ್ತಿದ್ದಳು. ಅದೇ ದಿನ ಆಕೆಯನ್ನು ಸುರಕ್ಷಿತವಾಗಿ ರಾಜಾಜಿನಗರದ ವಾರಿಯರ್ ಬೇಕರಿ ಬಳಿ ಡ್ರಾಪ್ ಮಾಡಿದ್ದೆ. ಆ ನಂತರ ಆಕೆ ಇನ್‌ಸ್ಟಾಗ್ರಾಂ ವಿಡಿಯೊ ಮೂಲಕ ಸುಳ್ಳು ಆರೋಪ ಮಾಡಿದ್ದಾಳೆ. ನಂತರ ಖಾಸಗಿ ವಾಹಿನಿ ಪ್ರತಿನಿಧಿಯ ಹೆಸರಿನಲ್ಲಿ ಇಮ್ರಾನ್ ಎಂಬಾತ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ’ ಎಂದು ನಿಖಿಲ್ ದೂರಿನಲ್ಲಿ ತಿಳಿಸಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.