ಬೆಂಗಳೂರು: ನಗರದ ಹಲವು ಮನೆಗಳು ಹಾಗೂ ಪೇಯಿಂಗ್ ಗೆಸ್ಟ್ಗಳ (ಪಿ.ಜಿ) ಕೊಠಡಿಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಆರೋಪದಡಿ ಎಂ.ಎ ಪದವೀಧರ ಸೇರಿ ಮೂವರನ್ನು ಮೈಕೊಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ತಮಿಳುನಾಡಿನ ತಮಿಳ್ ಸೆಲ್ವನ್ (28), ಲಕ್ಷ್ಮಣ (33) ಹಾಗೂ ಕಾರ್ತಿಕ್ (19) ಬಂಧಿತರು. ಆರೋಪಿ ಸೆಲ್ವನ್, ಎಂ.ಎ ಪದವೀಧರ. ಸೂಕ್ತ ಕೆಲಸ ಸಿಗದಿದ್ದರಿಂದ, ಕಳ್ಳತನಕ್ಕೆ ಇಳಿದಿದ್ದ. ಮೂವರು ಆರೋಪಿಗಳು, ಆಗಾಗ ನಗರಕ್ಕೆ ಬಂದು ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ನಗರದಲ್ಲಿ ಸುತ್ತಾಡುತ್ತಿದ್ದ ಆರೋಪಿಗಳು, ಬಾಗಿಲು ತೆರೆದಿರುತ್ತಿದ್ದ ಮನೆಗಳು ಹಾಗೂ ಪಿ.ಜಿ ಕೊಠಡಿಗಳನ್ನು ಗುರುತಿಸುತ್ತಿದ್ದರು. ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು, ಒಳಗೆ ನುಗ್ಗಿ ಕಳ್ಳತನ ಮಾಡುತ್ತಿದ್ದರು.’
‘ಕಳ್ಳತನ ಸಂಬಂಧ ಇತ್ತೀಚೆಗೆ ಪ್ರಕರಣವೊಂದು ದಾಖಲಾಗಿತ್ತು. ತನಿಖೆ ಕೈಗೊಂಡಾಗ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇವರಿಂದ ₹ 24 ಲಕ್ಷ ಮೌಲ್ಯದ 33 ಲ್ಯಾಪ್ಟಾಪ್ ಹಾಗೂ 40 ಮೊಬೈಲ್ ಜಪ್ತಿ ಮಾಡಲಾಗಿದೆ. ಮೂವರು ಆರೋಪಿಗಳ ವಿರುದ್ಧ ತಮಿಳುನಾಡಿನ ವಿವಿಧ ಠಾಣೆಗಳಲ್ಲೂ ಪ್ರಕರಣಗಳು ದಾಖಲಾಗಿವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.