
ದೃಷ್ಟಿ ರಾಷ್ಟ್ರೀಯ ನೃತ್ಯೋತ್ಸವ 24ಕ್ಕೆ
ಬೆಂಗಳೂರು: ದೃಷ್ಟಿ ಆರ್ಟ್ ಸೆಂಟರ್ನಿಂದ ಇದೇ 24ರಂದು ಸಂಜೆ 6ಕ್ಕೆ ವೈಯಾಲಿ ಕಾವಲ್ನ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ 21ನೇ ಆವೃತ್ತಿಯ ‘ದೃಷ್ಟಿ ರಾಷ್ಟ್ರೀಯ ನೃತ್ಯೋತ್ಸವ’ ನಡೆಯಲಿದೆ.
ಈ ಬಾರಿಯ ನೃತ್ಯೋತ್ಸವವನ್ನು ಭರತ ಗೀತಾ ಎಂಬ ಶೀರ್ಷಿಕೆ ಅಡಿಯಲ್ಲಿ ಆಯೋಜಿಸಲಾಗಿದೆ. ನಮ್ಮ ದೇಶದ ಅಪರೂಪದ ಪರಂಪರೆ ಮತ್ತು ಜ್ಞಾನಕ್ಕೆ ಆಧಾರವಾದ ಭಗವದ್ಗೀತೆ ಹಾಗೂ ನಾಟ್ಯಶಾಸ್ತ್ರಕ್ಕೆ ನೃತ್ಯದ ಮೂಲಕ ನಮನ ಸಲ್ಲಿಸಲಾಗುತ್ತದೆ. ಪದ್ಮಾ ಸುಬ್ರಹ್ಮಣ್ಯಂ ಅವರು ಭರತನಾಟ್ಯದ ಮೂಲಕ ಭಗವದ್ಗೀತೆಗೆ ಕೃತಜ್ಞತೆ ಸಲ್ಲಿಸಲಿದ್ದು, ನಿರುಪಮಾ ರಾಜೇಂದ್ರ, ಟಿ.ಡಿ. ರಾಜೇಂದ್ರ ಹಾಗೂ ಅಭಿನವ ಡಾನ್ಸ್ ಕಂಪನಿಯು ಕಥಕ್ ನೃತ್ಯದ ಮೂಲಕ ನಾಟ್ಯಶಾಸ್ತ್ರಕ್ಕೆ ನಮನ ಸಲ್ಲಿಸಲಿದೆ.
ಶತಾವಧಾನಿ ಆರ್. ಗಣೇಶ್, ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ವರಖೇಡಿ, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್, ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ನ ಅಧ್ಯಕ್ಷ ಪಿ. ದಯಾನಂದ ಪೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಉತ್ಸವ ನಿರ್ದೇಶಕರಾದ ಅನುರಾಧಾ ವಿಕ್ರಾಂತ್, ಟಿ.ಎಂ. ವಿಕ್ರಾಂತ್ ತಿಳಿಸಿದ್ದಾರೆ.
ಮಾಹಿತಿಗೆ: 98441 91888
ಬೆಂಗಳೂರು: ನೂಪುರಮೈತ್ರಿ ಕಲಾ ಕೇಂದ್ರವು ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಜ.24ರಂದು ಬೆಳಿಗ್ಗೆ 10.30ಕ್ಕೆ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ನೂಪುರಾರಾಧನ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಸ್ವಾತಿ ಅಯ್ಯಂಗಾರ್ ಮತ್ತು ಶಿಷ್ಯ ವೃಂದವು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ. ವಿದ್ಯಾಲಕ್ಷ್ಮಿ ಎಂ.ಎಸ್., ರೂಪಾ ಪ್ರಕಾಶ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬೆಂಗಳೂರು: ಎಂಇಎಸ್ ಕಲಾವೇದಿ ಹಾಗೂ ಯಕ್ಷೇಶ್ವರಿ ಯಕ್ಷಗಾನ ಸಂಸ್ಥೆಯ ಸಹಯೋಗದಲ್ಲಿ ಇದೇ 24ರಂದು ಸಂಜೆ 5.30ಕ್ಕೆ ವಿದ್ಯಾರಣ್ಯಪುರದ ಎಂ.ಇ.ಎಸ್ ಪ್ರೊ.ಬಿ.ಆರ್. ಸುಬ್ಬಾರಾವ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ‘ಭಸ್ಮಾಸುರ ಮೋಹಿನಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಉಚಿತ ಪ್ರವೇಶ ಇದೆ ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರು: ಸ್ಪಿಕ್ ಮೆಕೆ ಸಂಸ್ಥೆಯಿಂದ ಜ.25ರಂದು ಸಂಜೆ 7.30ಕ್ಕೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ‘ಯಾಮಿನಿ–2026’ ಸಂಗೀತ ಕಛೇರಿ ಹಮ್ಮಿಕೊಂಡಿದೆ.
ಗಾಯಕರಾದ ಸಿಕ್ಕಿಲ್ ಗುರುಚರಣ್, ಜಯತೀರ್ಥ ಮೇವುಂಡಿ ಅವರಿಗೆ ಯು.ಕೆ. ಶಿವರಾಮನ್ (ಮೃದಂಗ), ಲಾರ್ಸ್ ಮುಲ್ಲರ್ (ಸ್ಯಾಕ್ಸೊಫೋನ್), ಉಸ್ತಾದ್ ಬಹಾವುದ್ದೀನ್ ದಾಗರ್ (ರುದ್ರ ವೀಣಾ), ಕಲೀಶಾಬಿ ಮಹಬೂಬ್ (ನಾದಸ್ವರ) ಸಾಥ್ ನೀಡಲಿದ್ದಾರೆ. ಶುವನಾ ನಾರಾಯಣ್ ಕಥಕ್ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ ಇದೆ ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರು: ತೇಜಸ್ವಿ ವಿಸ್ಮಯ ವಿಷಯಾಧಾರಿತ ಫಲಪುಷ್ಪ ಪ್ರದರ್ಶನದ ಅಂಗವಾಗಿ ಇದೇ 25ರಂದು ಸಂಜೆ 5.15ಕ್ಕೆ ಲಾಲ್ಬಾಗ್ನಲ್ಲಿ ಪ್ರವರ ಥಿಯೇಟರ್ನಿಂದ ‘ಅಣ್ಣನ ನೆನಪು’ ನಾಟಕ ಪ್ರದರ್ಶನ ಆಯೋಜಿಸಿದೆ.
ಹನು ರಾಮಸಂಜೀವ ಅವರು ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗೆ: 96868 69676.
ಬೆಂಗಳೂರು: ಏಮ್ ಫಾರ್ ಸೇವಾದಿಂದ ಜ. 25ರಂದು ಸಂಜೆ 6.30ಕ್ಕೆ ಜಯನಗರದ ಎನ್ಎಂಕೆಆರ್ವಿ ಪಿಯು ಕಾಲೇಜಿನಲ್ಲಿ ‘ಹೇ ಗೋವಿಂದ’ ಭಕ್ತಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಗಾಯಕ ಜಯತೀರ್ಥ ಮೇವುಂಡಿ ಅವರಿಗೆ ಪ್ರವೀಣ್ ಗೋಡ್ಖಿಂಡಿ (ಕೊಳಲು), ಬಸವರಾಜ್ ಹಿರೇಮಠ (ಹಾರ್ಮೋನಿಯಂ), ರಾಜೇಂದ್ರ ನಾಕೋಡ್ (ತಬಲಾ), ಸುಕದ್ ಮಾಣಿಕ್ ಮುಂಡೆ (ಪಕ್ವಾಜ್), ಸೂರ್ಯಕಾಂತ್ ಗೋಪಾಲ್ ಸುರ್ವೆ (ಸೈಡ್ ರಿದಂ) ಸಾಥ್ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.