ಅಪಘಾತ, –ಪ್ರಾತಿನಿಧಿಕ ಚಿತ್ರ
–ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಬಸವನಗುಡಿಯ ವಾಸವಿ ರಸ್ತೆಯಲ್ಲಿ ಭಾನುವಾರ ರಾತ್ರಿ ಚಾಲಕ ಪಾನಮತ್ತನಾಗಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ನಾಲ್ಕು ವಾಹನಗಳು ಜಖಂಗೊಂಡಿವೆ. ಜತೆಗೆ ಮನೆಯೊಂದರ ಕಾಂಪೌಂಡ್ಗೂ ಹಾನಿಯಾಗಿದೆ.
ಬಾಣಸವಾಡಿ ಬಳಿಯ ಜೈಭಾರತ್ ನಗರ ನಿವಾಸಿ ಪ್ರಣಯ್ ಜೈನ್ (26) ಎಂಬುವವರು ಸ್ನೇಹಿತರೊಂದಿಗೆ ಪಾರ್ಟಿ ನಡೆಸಿ ಕಾರು ಚಾಲನೆ ಮಾಡಿಕೊಂಡು ಮನೆಗೆ ಹೋಗುವಾಗ ಈ ಅಪಘಾತ ಸಂಭವಿಸಿತ್ತು.
‘ಪ್ರಣಯ್ ಜೈನ್ ಅವರು ತಮ್ಮ ಬೆಂಜ್ ಕಾರಿನಲ್ಲಿ ಸ್ನೇಹಿತರನ್ನು ಅವರ ಮನೆಗಳಿಗೆ ಡ್ರಾಪ್ ಮಾಡಿ ಜೈಭಾರತ್ ನಗರದತ್ತ ತೆರಳುತ್ತಿದ್ದರು. ಮದ್ಯದ ನಶೆಯಲ್ಲಿ ಅವರು ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ್ದಾರೆ’ ಎಂದು ಸಂಚಾರ ಪೊಲೀಸರು ಹೇಳಿದರು.
ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ್ದರಿಂದ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿ ನಿಂತಿದ್ದ ಬೈಕ್ಗಳಿಗೆ ಹಾಗೂ ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ, ರಸ್ತೆ ಪಕ್ಕದ ಮನೆಯ ಕಾಂಪೌಂಡ್ಗೆ ಗುದ್ದಿದೆ.
ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಹೋಗಿ ಪ್ರಣಯ್ ಜೈನ್ ಅವರನ್ನು ತಪಾಸಣೆ ಮಾಡಿದಾಗ ಅವರು ಮದ್ಯ ಸೇವಿಸಿ ಕಾರು ಚಾಲನೆ ಮಾಡಿರುವುದು ದೃಢಪಟ್ಟಿದೆ. ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಾರು ಚಾಲಕರ ವಿರುದ್ಧ ಪಾನಮತ್ತ ಚಾಲನೆ ಆರೋಪದ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.