ADVERTISEMENT

ಬೆಂಗಳೂರು | ಅಧಿಕಾರಿಗಳ ಸೋಗಿನಲ್ಲಿ ಡಕಾಯಿತಿ: ಏಳು ಮಂದಿ ಸೆರೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 14:32 IST
Last Updated 11 ಅಕ್ಟೋಬರ್ 2025, 14:32 IST
ಹೇಮಂತ್‌ 
ಹೇಮಂತ್‌    

ಬೆಂಗಳೂರು: ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಡಕಾಯಿತಿ ಮಾಡಿದ್ದ ಏಳು ಆರೋಪಿಗಳನ್ನು ಯಲಹಂಕ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಾದ ಶಂಕರ್, ರಾಜೇಂದ್ರ ಮನೋತ್‌ ಜೈನ್‌, ಹೇಮಂತ್‌ ಜೈನ್‌, ಶ್ರೀನಿವಾಸಗೌಡ, ಜಗನ್‌ ಮೋಹನ್‌, ಶ್ರೀನಿವಾಸ, ಕಿರಣ್‌ ಜೈನ್‌ ಅವರಿಂದ ₹1.27 ಕೋಟಿ ನಗದು, ವಿವಿಧ ದಾಖಲೆಗಳು ಹಾಗೂ ಎರಡು ಕಾರು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಠಾಣಾ ವ್ಯಾಪ್ತಿಯ ವಿನಾಯಕನಗರದ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ದೂರುದಾರ, ಉಪನ್ಯಾಸಕ ಗಿರಿರಾಜು ಮನೆಯಲ್ಲಿ ಆರೋಪಿ ಶಂಕರ್ ಎಂಬಾತ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ದೂರುದಾರರು ಜಮೀನು ಖರೀದಿಸಲು ಮನೆಗೆ ಹಣ ತಂದಿಟ್ಟಿರುವುದು ಚಾಲಕನಿಗೆ ತಿಳಿದಿತ್ತು. ಮನೆಯಲ್ಲಿ ಹಣವಿದ್ದ ಮಾಹಿತಿಯನ್ನು ಇತರೆ ಆರೋಪಿಗಳಿಗೆ ತಿಳಿಸಿದ್ದ. ಏಳು ಮಂದಿ ಸೇರಿಕೊಂಡು ಸರ್ಕಾರಿ ಅಧಿಕಾರಿಗಳು ಎಂದು ಹೇಳಿಕೊಂಡು ಡಕಾಯಿತಿ ನಡೆಸಲು ಸಂಚು ರೂಪಿಸಿದ್ದರು. ಸೆ.19ರ ಬೆಳಿಗ್ಗೆ ದೂರುದಾರರ ಪತ್ನಿ ಹಾಗೂ ತಾಯಿ ಮನೆಯಲ್ಲಿ ಇದ್ದರು. ಆ ಸಂದರ್ಭದಲ್ಲಿ ಆರೋಪಿಗಳು ಸರ್ಕಾರಿ ಅಧಿಕಾರಿಗಳೆಂದು ಹೇಳಿಕೊಂಡು ಮನೆಗೆ ನುಗ್ಗಿದ್ದರು. ಇಬ್ಬರನ್ನು ಬೆದರಿಸಿ ಮನೆಯಲ್ಲಿದ್ದ ದಾಖಲೆಗಳು ಹಾಗೂ ಸೂಟ್‌ಕೇಸ್‌, ಬ್ಯಾಗ್‌ನಲ್ಲಿ ತಂಬಿಡಲಾಗಿದ್ದ ಹಣವನ್ನು ಕಳ್ಳತನ ಮಾಡಿಕೊಂಡು ಪರಾರಿ ಆಗಿದ್ದರು’ ಎಂದು ಪೊಲೀಸರು ಹೇಳಿದರು.

‘ಸಂಜಯ್‌ ನಗರದಲ್ಲಿ ಅನುಮಾನಸ್ಪದವಾಗಿ ಓಡಾಟ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಇತರೆ ಆರು ಮಂದಿಯ ಜತೆಗೆ ಸೇರಿಕೊಂಡು ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಬಳಿಕ ಕಾರ್ಯಾಚರಣೆ ನಡೆಸಿ ಇತರೆ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

‘ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡು ಕಾರಿನಲ್ಲಿ ಆರೋಪಿಗಳು ಬಂದಿದ್ದರು. ಬಿಳಿ ಬಣ್ಣದ ಶರ್ಟ್ ಧರಿಸಿದ್ದ ಆರೋಪಿಗಳು, ಸರ್ಕಾರಿ ಅಧಿಕಾರಿಗಳೆಂದು ಹೇಳಿಕೊಂಡಿದ್ದರು. ಮನೆಯಲ್ಲಿ ಇದ್ದವರ ಮೊಬೈಲ್‌ ಕಸಿದುಕೊಂಡಿದ್ದರು. ಎಲ್ಲರನ್ನೂ ಪ್ರತ್ಯೇಕ ಕೋಣೆಯಲ್ಲಿ ಕೂಡಿ ಹಾಕಿದ್ದರು. ಬಳಿಕ ಹಣ ದೋಚಿ ಪರಾರಿ ಆಗಿದ್ದರು’ ಎಂದು ಮಾಹಿತಿ ನೀಡಿದರು.

ಕಿರಣ್‌ 
ರಾಜೇಂದ್ರ 
ಶಂಕರ್
ಶ್ರೀನಿವಾಸ 
ಶ್ರೀನಿವಾಸಗೌಡ 
ಜಗನ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.