ADVERTISEMENT

ಬೆಂಗಳೂರು: ₹27.72 ಕೋಟಿ ಮೌಲ್ಯದ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 13:01 IST
Last Updated 8 ಫೆಬ್ರುವರಿ 2026, 13:01 IST
ವಿಜಯನಗರ ಮೂರನೇ ಹಂತದಲ್ಲಿ ಶನಿವಾರ ಎಂಡಿಎ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು 
ವಿಜಯನಗರ ಮೂರನೇ ಹಂತದಲ್ಲಿ ಶನಿವಾರ ಎಂಡಿಎ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು    

ಬೆಂಗಳೂರು: ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ₹27.72 ಕೋಟಿ ಅಂದಾಜು ಮೌಲ್ಯದ ಒಟ್ಟು 8.04 ಎಕರೆ ಸರ್ಕಾರಿ ಭೂಮಿಯನ್ನು ಶನಿವಾರ ತೆರವುಗೊಳಿಸಿ ಜಿಲ್ಲಾಡಳಿತದ ವಶಕ್ಕೆ ಪಡೆಯಲಾಯಿತು.

ವಿವಿಧ ತಾಲ್ಲೂಕು ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಗೋಮಾಳ, ಸರ್ಕಾರಿ ಖರಾಬು ಕೆರೆ, ಮುಪತ್ತು ಕಾವಲ್, ಸರ್ಕಾರಿ ಬಂಜರು, ಖರಾಬು ತೋಪು, ಹದ್ದುಗಿಡದಹಳ್ಳ, ಇನಾಂತಿ ಜಮೀನು ಹಾಗೂ ಗುಂಡುತೋಪು ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.

ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಖಾಜಿಸೊಣ್ಣೇನಹಳ್ಳಿ ಗ್ರಾಮದಲ್ಲಿನ ₹6 ಕೋಟಿ ಮೌಲ್ಯದ 1.30 ಎಕರೆ ಗೋಮಾಳ, ಕಣ್ಣೂರು ಗ್ರಾಮದ ₹2 ಕೋಟಿ ಮೌಲ್ಯದ 22 ಗುಂಟೆ ಗೋಮಾಳ, ಆನೇಕಲ್ ತಾಲ್ಲೂಕು ಜಿಗಣಿ ಹೋಬಳಿ ಎಸ್.ಬಿಂಗೀಪುರ ಗ್ರಾಮದಲ್ಲಿರುವ ಅಂದಾಜು ₹9 ಕೋಟಿ ಮೌಲ್ಯದ 1.20 ಎಕರೆ ಸರ್ಕಾರಿ ಕೆರೆ, ಸರ್ಜಾಪುರ ಗ್ರಾಮದ‌ಲ್ಲಿರುವ ₹45 ಲಕ್ಷ ಅಂದಾಜು ಮೌಲ್ಯದ 0.13 ಗುಂಟೆ ಮುಪತ್ತು ಕಾವಲ್ ತೆರವು ಮಾಡಲಾಗಿದೆ.

ADVERTISEMENT

ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿ ಶೇಷಗಿರಿಪುರದ ಅಂದಾಜು ₹15 ಲಕ್ಷ ಮೌಲ್ಯದ 20 ಗುಂಟೆ ಬಂಜರು, ಯಲಹಂಕ ತಾಲ್ಲೂಕು ಜಾಲ ಹೋಬಳಿ ಬಾಗಲೂರಿನಲ್ಲಿ ಒಂದು ಎಕರೆ ಖರಾಬ್ ತೋಪು, ಹೆಸರಘಟ್ಟ ಹೋಬಳಿ ಇಟ್ಟಗಲಾಪುರ ಗ್ರಾಮದ ₹64 ಲಕ್ಷ ಮೌಲ್ಯದ 32 ಗುಂಟೆ ಹದ್ದುಗಿಡದಹಳ್ಳ, ಸೊಣ್ಣೆನಹಳ್ಳಿ ಗ್ರಾಮದಲ್ಲಿರುವ ₹48 ಲಕ್ಷ ಅಂದಾಜು ಮೌಲ್ಯದ 24 ಗುಂಟೆ ಇನಾಂತಿ ಜಮೀನು, ಉತ್ತರ ತಾಲ್ಲೂಕು ದಾಸನಪುರ ಹೋಬಳಿ ಬೈಯಂಡಹಳ್ಳಿ ಗ್ರಾಮದಲ್ಲಿರುವ ಅಂದಾಜು ‌₹5 ಮೌಲ್ಯದ 1.03 ಎಕರೆ ಗುಂಡುತೋಪು ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.