ಪೊಲೀಸ್
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಜಪ್ತಿಯಾಗಿದ್ದ ದ್ವಿಚಕ್ರ ವಾಹನ ಪಡೆಯಲು ಬಂದ ಈಶ್ವರ್ ಅವರ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ವಿಜಯನಗರ ಸಂಚಾರ ಠಾಣೆಯ ಪಿಎಸ್ಐ ಶಾಂತರಾಮ್ ಹಾಗೂ ಹೆಡ್ಕಾನ್ಸ್ಟೆಬಲ್ ಸಿದ್ದಿಕಿ ಅವರನ್ನು ಅಮಾನತುಗೊಳಿಸಿ ಸಂಚಾರ ವಿಭಾಗದ ಜಂಟಿ ಕಮಿಷನರ್ ಎಂ.ಎನ್.ಅನುಚೇತ್ ಆದೇಶಿಸಿದ್ದಾರೆ.
ಮಾರ್ಚ್ 14ರಂದು ಜಿ. ಟಿ. ಮಾಲ್ ಬಳಿ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡುವ ವೇಳೆ ದ್ವಿಚಕ್ರ ವಾಹನ ಸವಾರ ಈಶ್ವರ್ ಪಾನಮತ್ತರಾಗಿರುವುದು ಪತ್ತೆಯಾಗಿತ್ತು.
'ನ್ಯಾಯಾಲಯದಲ್ಲಿ ದಂಡ ಪಾವತಿಸಿದರೆ ₹10 ಸಾವಿರ, ಸ್ಥಳದಲ್ಲಿಯೇ ₹3 ಸಾವಿರ ನೀಡಿದರೆ ಬಿಟ್ಟು ಕಳಿಸುತ್ತೇವೆ ಎಂದು ಪಿಎಸ್ಐ ಮತ್ತು ಸಿಬ್ಬಂದಿ ಹೇಳಿದ್ದರು' ಎಂದು ಈಶ್ವರ್ ಆರೋಪಿಸಿದ್ದಾರೆ.
‘ಆನ್ಲೈನ್ನಲ್ಲಿ ಹಣ ವರ್ಗಾಯಿಸಲು ಮುಂದಾದಾಗ ನಗದು ನೀಡುವಂತೆ ಪೊಲೀಸರು ಒತ್ತಾಯಿಸಿದ್ದರು. ನನ್ನ ಬಳಿ ಹಣವಿಲ್ಲ, ನ್ಯಾಯಾಲಯದಲ್ಲಿಯೇ ದಂಡ ಪಾವತಿಸುವುದಾಗಿ ಹೇಳಿದ್ದೆ. ದ್ವಿಚಕ್ರ ವಾಹನ ಜಪ್ತಿ ಮಾಡಿ, ದಂಡದ ರಶೀದಿ ಕೊಟ್ಟು ಕಳುಹಿಸಿದ್ದರು’ ಎಂದು ತಿಳಿಸಿದ್ದಾರೆ.
ದಂಡ ಪಾವತಿ ಬಳಿಕ ಈಶ್ವರ್, ತಮ್ಮ ದ್ವಿಚಕ್ರ ವಾಹನ ಹಿಂಪಡೆಯಲು ಠಾಣೆ ಬಳಿ ಹೋಗಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ಅವರನ್ನು ನಿಂದಿಸಿ, ಥಳಿಸಿದ ಕಾರಣ ಪ್ರಜ್ಞೆ ತಪ್ಪಿದ್ದಾರೆ. ತಕ್ಷಣ ಆಟೊ ಕರೆಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರು, ಪೊಲೀಸರನ್ನು ತರಾಟೆ ತೆಗೆದುಕೊಂಡಿದ್ದಾರೆ. ‘ನಾನು ಹಲ್ಲೆ ಮಾಡಿಲ್ಲ’ ಎಂದು ಪಿಎಸ್ಐ ಹೇಳುತ್ತಿರುವ ವಿಡಿಯೊ ಜಾಲತಾಣದಲ್ಲಿ ಹರಿದಾಡಿತ್ತು.
ಬಳಿಕ ಡಿಸಿಪಿ ಅನಿತಾ ಹದ್ದಣವರ ಅವರು ಎಸಿಪಿಗೆ ವರದಿ ನೀಡುವಂತೆ ಸೂಚಿಸಿದ್ದರು. ವರದಿ ಆಧರಿಸಿ ಇಬ್ಬರನ್ನು ಅಮಾನತುಗೊಳಿಸಿ, ಇಲಾಖೆ ವಿಚಾರಣೆ ಕಾಯ್ದಿರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.