ADVERTISEMENT

ಒಆರ್‌ಆರ್‌ ಮೆಟ್ರೊ: 833 ಮರಗಳಿಗೆ ಕೊಡಲಿಯೇಟು

ಆಕ್ಷೇಪಣೆ ಸಲ್ಲಿಕೆಗೆ ಜುಲೈ 14ರವರೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 21:19 IST
Last Updated 25 ಜೂನ್ 2021, 21:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ನಮ್ಮ ಮೆಟ್ರೊ‘ ಎರಡನೇ ಹಂತದಲ್ಲಿನ ಹೊರವರ್ತುಲ ರಸ್ತೆಯಲ್ಲಿ (ಒಆರ್‌ಆರ್‌) ಮೆಟ್ರೊ ಮಾರ್ಗ ನಿರ್ಮಾಣಕ್ಕಾಗಿ 833 ಮರಗಳನ್ನು ಕಡಿಯಲು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ಬಿಬಿಎಂಪಿ ಅನುಮತಿ ನೀಡಿದೆ. ಈ ಕುರಿತು ಗುರುವಾರ ಸುತ್ತೋಲೆ ಹೊರಡಿಸಿದೆ.

ಸೆಂಟ್ರಲ್‌ ಸಿಲ್ಕ್‌ಬೋರ್ಡ್‌ನಿಂದ ಕಾಡುಬೀಸನಹಳ್ಳಿಯವರೆಗೆ ಮೆಟ್ರೊ ಮಾರ್ಗ ನಿರ್ಮಿಸಲು ಈ ಮರಗಳು ಅಡ್ಡಿಯಾಗಿವೆ. ರಸ್ತೆಯ ಮಧ್ಯಭಾಗದಲ್ಲಿ (ಮೀಡಿಯನ್‌) ಈ ಮರಗಳಿದ್ದು, ಕಡಿಯುವುದು ಅನಿವಾರ್ಯವಾಗಿದೆ. ಈ ಸಂಬಂಧ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಬಹುದು. ಜುಲೈ 4ರೊಳಗೆ ಈ ಆಕ್ಷೇಪಣೆಗಳನ್ನು ಸಲ್ಲಿಸಬೇಕು ಎಂದು ಬಿಬಿಎಂಪಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಎಸ್. ರಂಗನಾಥ ಸ್ವಾಮಿ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಮೀಡಿಯನ್‌ನಲ್ಲಿರುವ ಈ ಮರಗಳು ತೀರಾ ದೊಡ್ಡವಲ್ಲ. ಸ್ಥಳಾಂತರಿಸಬೇಕೆಂದರೆ ಬೇರುಗಳು ಕೂಡ ಅಷ್ಟು ಆಳವಾಗಿ ಬೆಳೆದಿಲ್ಲ. ಮರಗಳನ್ನು ಕಡಿಯಲೇಬೇಕಾಗಿದೆ. ನ್ಯಾಯಾಲಯದ ಆದೇಶದಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನಿಗಮವು ಒಂದು ಮರಕ್ಕೆ 10 ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದೂ ನ್ಯಾಯಾಲಯ ಹೇಳಿದೆ’ ಎಂದು ಅವರು ತಿಳಿಸಿದರು.

ADVERTISEMENT

ಅವಧಿ ವಿಸ್ತರಣೆ:

ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿಗೆ 6,316 ಮರಗಳನ್ನು ಕಡಿಯುವುದಕ್ಕೆ ಮುಂದಾಗಿರುವ ಅರಣ್ಯ ಇಲಾಖೆಯ ಕ್ರಮಕ್ಕೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹಲವು ಸಂಘ–ಸಂಸ್ಥೆಗಳು ಆಕ್ಷೇಪಣೆ ಸಲ್ಲಿಕೆ ಅವಧಿಯನ್ನು ವಿಸ್ತರಿಸುವಂತೆಯೂ ಒತ್ತಾಯಿಸಿದ್ದವು.

ಜೂನ್ 14ಕ್ಕೆ ಈ ಕುರಿತು ಸುತ್ತೋಲೆ ಹೊರಡಿಸಿದ್ದ ಇಲಾಖೆಯು, ಆಕ್ಷೇಪಣೆ ಸಲ್ಲಿಕೆಗೆ 10 ದಿನಗಳ ಕಾಲಾವಕಾಶ ನೀಡಿತ್ತು. ಈಗ, 20 ದಿನಗಳಿಗೆ ವಿಸ್ತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.