ಪ್ರಾತಿನಿಧಿಕ ಚಿತ್ರ
ಬೆಂಗಳೂರು: ನಗರದಲ್ಲಿರುವ ಮೂರು ಅಂತಸ್ತಿಗೂ ಹೆಚ್ಚಿನ ಕಟ್ಟಡಗಳಲ್ಲಿ ಒಣ ಹಾಗೂ ಹಸಿ ಕಸಕ್ಕೆ ಪ್ರತ್ಯೇಕವಾಗಿ ಬುಟ್ಟಿಗಳನ್ನು (ಬಿನ್) ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೋಮವಾರ ನಡೆದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತ್ಯೇಕ ಬುಟ್ಟಿಗಳನ್ನು ಅವರ ಜಾಗದಲ್ಲಿ ಅಳವಡಿಸಿಕೊಳ್ಳಲು ಕಟ್ಟಡದವರಿಗೆ ಕೂಡಲೇ ನೋಟಿಸ್ ಜಾರಿ ಮಾಡಬೇಕು. ಈ ಬಗ್ಗೆ ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಆದೇಶಿಸಿದರು.
ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು ಪರಿಶೀಲಿಸಿ, ಎಲ್ಲೆಲ್ಲಿ ಪಾದಚಾರಿ ಮಾರ್ಗಗಳ ದುರಸ್ತಿ ಅಗತ್ಯವಿದೆ ಹಾಗೂ ಎಲ್ಲೆಲ್ಲಿ ಹೊಸದಾಗಿ ನಿರ್ಮಾಣ ಆಗಬೇಕಿದೆ ಎಂಬುದರ ಪಟ್ಟಿಯನ್ನು ಸಿದ್ಧಪಡಿಸಿ ಹಂತ-ಹಂತವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಸೂಚಿಸಿದರು.
ಪೂರ್ವ ನಗರ ಪಾಲಿಕೆಯಲ್ಲಿ ರಸ್ತೆ ಬದಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ತ್ಯಾಜ್ಯ ವಿಸರ್ಜನೆ ಸಮಸ್ಯೆ ಉಂಟಾಗಿದೆ. ಜೊತೆಗೆ ಮನೆ ಮನೆಗೆ ಕಸ ಸಂಗ್ರಹಣೆಯಲ್ಲಿಯೂ ಸಮಸ್ಯೆ ಇರುವ ಬಗ್ಗೆ ನಾಗರಿಕರು ಅಹವಾಲು ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ತ್ಯಾಜ್ಯ ನಿರ್ವಹಣೆಯಲ್ಲಿ ಸಮಸ್ಯೆ ಇರುವ ಪ್ರದೇಶಗಳನ್ನು ಗುರುತಿಸಿ ಮೈಕ್ರೋ ಪ್ಲಾನ್ ಸಿದ್ಧಪಡಿಸಿ, ವ್ಯವಸ್ಥಿತ ರೀತಿಯಲ್ಲಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ಇ-ಖಾತಾದಲ್ಲಿ ಹೆಸರು ಬದಲಾವಣೆಯಲ್ಲಿ ಸಮಸ್ಯೆ, ಪಟ್ಟಂದೂರು ಅಗ್ರಹಾರದ ಇಸಿಸಿ ರಸ್ತೆಯಲ್ಲಿ ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ, ರಾಮಮೂರ್ತಿ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಹೂಡಿ ರಸ್ತೆ–ಸಾದರಮಂಗಲ ರಸ್ತೆ ಮಾರ್ಗದಲ್ಲಿ ಅರ್ಧಕ್ಕೆ ನಿಂತಿದೆ, ಸಾಯಿ ಗಾರ್ಡನ್ ಲೇಔಟ್ನಲ್ಲಿ ರಸ್ತೆ ಭಾಗದಲ್ಲಿ ಗೋಡೆ ನಿರ್ಮಿಸಿರುವುದರಿಂದ ಸಂಚಾರಕ್ಕೆ ತೊಂದರೆ, ವಸತಿ ಪ್ರದೇಶದಲ್ಲಿ ಅನಧಿಕೃತವಾಗಿ ಪಿಜಿ ನಿರ್ಮಾಣ, ಬೋಗನಹಳ್ಳಿ ಕೆರೆಗೆ ಕೊಳಚೆ ನೀರು ಸೇರುತ್ತಿರುವ ಸಮಸ್ಯೆಗಳನ್ನು ನಾಗರಿಕರು ಮುಖ್ಯ ಆಯುಕ್ತರ ಗಮನಕ್ಕೆ ತಂದರು.
ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್, ಅಭಿವೃದ್ಧಿ ಹೆಚ್ಚುವರಿ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್, ಕಂದಾಯದ ಹೆಚ್ಚುವರಿ ಆಯುಕ್ತರಾದ ಪ್ರಜ್ಞಾ ಅಮ್ಮೆಂಬಳ, ಜಂಟಿ ಆಯುಕ್ತರಾದ ಡಾ.ದಾಕ್ಷಾಯಿಣಿ ಕೆ ಹಾಗೂ ಡಾ.ಸುಧಾ, ಮುಖ್ಯ ಎಂಜಿನಿಯರ್ಗಳಾದ ಲೋಕೇಶ್ ಮತ್ತು ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.