ADVERTISEMENT

‘ಮಳೆ ಅವಾಂತರ: ಬ್ರ್ಯಾಂಡ್‌ ಬೆಂಗಳೂರಿಗೆ ಕೆಟ್ಟ ಹೆಸರು’–ಎಸ್‌.ಎಂ.ಕೃಷ್ಣ ಎಚ್ಚರಿಕೆ

ಮುಖ್ಯಮಂತ್ರಿಗೆ ಪತ್ರ ಬರೆದು ಎಸ್‌.ಎಂ.ಕೃಷ್ಣ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಮೇ 2022, 20:02 IST
Last Updated 19 ಮೇ 2022, 20:02 IST
ಎಸ್.ಎಂ.ಕೃಷ್ಣ
ಎಸ್.ಎಂ.ಕೃಷ್ಣ   

ಬೆಂಗಳೂರು: ನಗರದಲ್ಲಿ ಮಳೆಯ ಅನಾಹುತಗಳು ಉದ್ಯಮ ವಲಯದಲ್ಲಿ ಆತಂಕ ಹುಟ್ಟಿಸಿದೆ. ಇದರಿಂದ ‘ಬ್ರ್ಯಾಂಡ್‌ ಬೆಂಗಳೂರು’ ಹೆಸರಿಗೆ ಕೆಟ್ಟ ಹೆಸರು ಬರಲಿದೆ. ಭವಿಷ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ಬಂಡವಾಳ ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದು ಬಿಜೆಪಿ ನಾಯಕ ಎಸ್‌.ಎಂ.ಕೃಷ್ಣ ಹೇಳಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಸಲಹೆಗಳನ್ನೂ ನೀಡಿದ್ದಾರೆ.

‘ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ನಿರಂತರ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಇದರಿಂದ ಹಲವು ಅವಾಂತರಗಳು ಘಟಿಸಿ ಜನಜೀವನಕ್ಕೆ ತೊಂದರೆಯಾಗಿದೆ. ಇದರ ಪರಿಣಾಮ ಕೈಗಾರಿಕಾ ವಸಹಾತುಗಳು ಬೇರೆ ರಾಜ್ಯಗಳ ಪಾಲಾಗಿ ನಮ್ಮ ರಾಜ್ಯದ ಅಭಿವೃದ್ಧಿಗೆ ತೊಡಕಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನಾನು ಮುಖ್ಯಮಂತ್ರಿಯಾಗಿದ್ದಾಗ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಆದ್ಯತೆ ನೀಡಿ ಹೇರಳ ಅವಕಾಶಗಳನ್ನು ನೀಡಿದ್ದರಿಂದ ಅಮೆರಿಕದ ಕ್ಯಾಲಿಫೋರ್ನಿಯಾ ನಗರದ ಸಿಲಿಕಾನ್‌ ವ್ಯಾಲಿಗೆ ಪರ್ಯಾಯವಾಗಿ ಬೆಂಗಳೂರು ಬೆಳೆಯಿತು. ನಗರದ ವಿಸ್ತೀರ್ಣವೂ 4 ಪಟ್ಟು ಹೆಚ್ಚಾಯಿತು’ ಎಂದು ಅವರು ತಿಳಿಸಿದ್ದಾರೆ.

‘ದೇವೇಗೌಡರ ಬ್ರ್ಯಾಂಡ್ ಬೆಂಗಳೂರು ಹೈಜಾಕ್’

‘ಬ್ರ್ಯಾಂಡ್‌ ಬೆಂಗಳೂರು ದೇವೇಗೌಡರ ಕಾಲದಲ್ಲಿ ಮಾಡಿದ್ದು. ಅದನ್ನು ಇವರು (ಕೃಷ್ಣ) ಹೈಜಾಕ್‌ ಮಾಡಿದರು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಎಸ್‌.ಎಂ.ಕೃಷ್ಣ ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿ, ‘ಸೂಟು ಬೂಟು ಹಾಕಿಕೊಂಡರೆ ಬ್ರ್ಯಾಂಡ್‌ ಬೆಂಗಳೂರು ಆಗಲ್ಲ. ಕೆಲಸ ಮಾಡಿದಾಗ ಆಗುತ್ತದೆ. ಕೆರೆ ಕಟ್ಟೆ ಉಳಿಸಲು ಲಕ್ಷಣ್‌ ರಾವ್‌ ನೇತೃತ್ವದ ಸಮಿತಿಯನ್ನು ದೇವೇಗೌಡರು ರಚಿಸಿದರು. ಸಮಿತಿ ವರದಿ ಕಸದ ಬುಟ್ಟಿ ಸೇರಿತು. ಕೆರೆ ಮುಚ್ಚಿ ಮನೆ ಕಟ್ಟಿದರು. ಕೆರೆಗೆ ಹೋಗುವ ನೀರು ಮನೆಗಳಿಗೆ ನುಗ್ಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.