ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರು ನಗರದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ರಸ್ತೆ, ಅಂಡರ್ಪಾಸ್, ಬಡಾವಣೆಗಳು ಸಂಪೂರ್ಣ ಜಲಾವೃತಗೊಂಡಿವೆ. ರಸ್ತೆಗಳ ಮೇಲೆ ಮರಗಳು ಬಿದ್ದ ಪರಿಣಾಮ ಸಂಚಾರವೂ ದುಸ್ತರವಾಗಿದೆ.
ಮಹಾದೇವಪುರ ವಲಯ ವ್ಯಾಪ್ತಿಯ ಶ್ರೀ ಸಾಯಿ ಬಡಾವಣೆ ಕರೆಯಂತಾಗಿದ್ದು, ಟ್ರ್ಯಾಕ್ಟರ್ಗಳ ಮೂಲಕ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್, ಮಾನ್ಯತಾ ಟೆಕ್ ಪಾರ್ಕ್, ಶಾಂತಿ ನಗರ ಬಸ್ ನಿಲ್ದಾಣ ಸೇರಿದಂತೆ ಹಲವು ಸ್ಥಳಗಳು ಜಲಾವೃತಗೊಂಡಿವೆ.
ಬೆಂಗಳೂರಿನ ಅವ್ಯವಸ್ಥೆಗೆ ಜನ ರಾಜ್ಯ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ‘ಗ್ರೇಟರ್ ಬೆಂಗಳೂರಲ್ಲ ವಾಟರ್ ಬೆಂಗಳೂರು’ ಎಂದು ಕಿಡಿ ಕಾರಿದ್ದಾರೆ.
ಏತನ್ಮಧ್ಯೆ, ಮಳೆಗೆ ಬೀಚ್ನಂತಾದ ಬೆಂಗಳೂರಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಬಗೆಯ ಮೀಮ್ಸ್ಗಳು ಹರಿದಾಡುತ್ತಿವೆ.
‘ಪಾಕ್ ದಾಳಿಗೆ ಧ್ವಂಸಗೊಂಡಿದ್ದ ಬೆಂಗಳೂರು ಬಂದರು ಕೇವಲ ಒಂದೇ ವಾರಕ್ಕೆ ಮತ್ತೆ ತಲೆ ಎತ್ತಿದೆ’ ಎಂದು ನೆಟ್ಟಿಗರೊಬ್ಬರು ಜಲಾವೃತಗೊಂಡ ರಸ್ತೆಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
‘ಬೆಂಗಳೂರಿನ ರಸ್ತೆಗಳು ಇದೀಗ ಶೇ 50ರಷ್ಟು ಗುಂಡಿಗಳು ಮತ್ತು ಶೇ 50 ರಷ್ಟು ನೀರಿನಿಂದ ಕೂಡಿದೆ’ ಎಂದು ಮತ್ತೊಬ್ಬರು ಬಿಬಿಎಂಪಿಯನ್ನು ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ.
ಇದೇ ರೀತಿಯ ಹಲವು ಮೀಮ್ಸ್ಗಳು ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.