ADVERTISEMENT

ಬೆಂಗಳೂರು: ‘ಒತ್ತುವರಿ ನಿರ್ಲಕ್ಷ್ಯ: ಕ್ರಿಮಿನಲ್‌ ಮೊಕದ್ದಮೆ’

ತೆರವು ಕಾರ್ಯಾಚರಣೆಗೆ ತಂಡ ರಚನೆ: ದಕ್ಷಿಣ ತಾಲ್ಲೂಕು ತಹಶೀಲ್ದಾರ್‌ ಆದೇಶ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 22:13 IST
Last Updated 2 ಅಕ್ಟೋಬರ್ 2022, 22:13 IST
   

ಬೆಂಗಳೂರು: ಸರ್ಕಾರಿ ಕೆರೆ, ರಾಜಕಾಲುವೆ ಮತ್ತು ಇತರೆ ಜಲಮೂಲಗಳ ರಕ್ಷಣೆ ಕರ್ತವ್ಯದಲ್ಲಿ ಉದಾಸೀನ ತೋರುವ ಸರ್ಕಾರಿ ನೌಕರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ ಎಂದು ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್‌ ಎಚ್ಚರಿಸಿದ್ದಾರೆ.

ಕೆರೆ, ಕುಂಟೆ, ರಾಜಕಾಲುವೆ, ಹಳ್ಳ, ಕಟ್ಟೆ ಮುಂತಾದ ನೀರಿನ ಮೂಲಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಕಂದಾಯ, ಸರ್ವೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಅಧಿಕಾರಿಗಳ ಜಂಟಿ ತಂಡ ರಚಿಸಲಾಗಿದೆ. ಈ ತಂಡದಲ್ಲಿರುವ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಹಾಗೂ ಭೂ ಮಾಪಕರ ಹೆಸರನ್ನು ನಮೂದಿಸಿ, ಅ.3ರಿಂದ ಕಾರ್ಯಾಚರಣೆ ನಡೆಸಬೇಕು ಎಂದು ಆದೇಶ ಹೊರಡಿಸಿದ್ದಾರೆ.

ನಗರದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ, ರಾಜಕಾಲುವೆ, ಕೆರೆ, ಕುಂಟೆ, ಹಳ್ಳ ಒತ್ತುವರಿಯಾಗಿರುವುದರಿಂದ ಜಲಮೂಲಗಳಲ್ಲಿ ಹರಿಯಬೇಕಿದ್ದ ನೀರು ರಸ್ತೆ ಮತ್ತು ಬಡಾವಣೆಗಳಿಗೆ ನುಗ್ಗಿ ರಸ್ತೆ, ಆಸ್ತಿಗೆ ಹಾನಿ ಉಂಟಾಗಿದೆ. ಹೀಗಾಗಿ ಒತ್ತುವರಿ ತೆರವು ಮಾಡುವುದು ಅತ್ಯಗತ್ಯ. ಈ ಬಗ್ಗೆ ಹೈಕೋರ್ಟ್‌ ಕೂಡ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಅ.1ರಂದು ನಡೆದ ಬಿಬಿಎಂಪಿ– ಕೆರೆ ವಿಭಾಗದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ರಾಜಸ್ವ ನಿರೀಕ್ಷಕರು ಹಾಗೂ ಮೋಜಿಣಿದಾರರ ಸಭೆಯಲ್ಲಿ ಒತ್ತುವರಿ ತೆರವಿಗೆ ವಿಶೇಷ ಕಾರ್ಯಾಚರಣೆ ನಡೆಸಲು ಚರ್ಚಿಸಿ ತೀರ್ಮಾನಿಸಲಾಗಿದೆ.

ADVERTISEMENT

ದಕ್ಷಿಣ ತಾಲ್ಲೂಕಿನ ಅಗರ, ಚಿಕ್ಕನಹಳ್ಳಿ, ಚೋಳನಾಯಕನಹಳ್ಳಿ, ಚುಂಚನಕುಪ್ಪೆ, ದೊಡ್ಡತೋಗೂರು, ಎಚ್‌. ಗೊಲ್ಲಹಳ್ಳಿ, ಕೆ. ಗೊಲ್ಲಹಳ್ಳಿ, ಕಗ್ಗಲೀಪುರ, ಕೋನಪ್ಪನ ಅಗ್ರಹಾರ, ಕುಂಬಳಗೋಡು, ರಾಮೋಹಳ್ಳಿ, ಸೋಮನಹಳ್ಳಿ, ಸೂಲಿಕೆರೆ, ತರಳು, ತಾವರೆಕೆರೆ, ಅಜ್ಜನಹಳ್ಳಿ, ಚನ್ನೇನಹಳ್ಳಿ, ನೆಲಗುಳಿ ಗ್ರಾಮ ಪಂಚಾಯಿತಿಗೆ ಪ್ರತ್ಯೇಕವಾದ ತಂಡ ರಚಿಸಿ, ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ.

ಷರತ್ತುಗಳು: ಜಲಮೂಲಗಳ ಒತ್ತುವರಿ ತೆರವಿಗೆ ಅಗತ್ಯವಾದ ಜೆಸಿಬಿ ಮತ್ತು ಇಟಿಎಸ್‌ ಯಂತ್ರೋಪಕರಣಗಳ ವ್ಯವಸ್ಥೆಯನ್ನು ಪಿಡಿಒ ಮಾಡಬೇಕು. ಅದಕ್ಕೆ ತಗುಲುವ ವೆಚ್ಚವನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ನಿಧಿಯಿಂದ ಭರಿಸಬೇಕು. ಭೂ ಮಾಪಕರು ಕೆರೆ, ಕುಂಟೆ, ರಾಜಕಾಲುವೆ, ಹಳ್ಳ, ಕಟ್ಟೆ ಮುಂತಾದ ನೀರಿನ ಮೂಲಗಳ ಪ್ರದೇಶ ಹಾಗೂ ಸರ್ಕಾರಿಜಾಗದಲ್ಲಿ ಒತ್ತುವರಿ ಗುರುತಿಸಬೇಕು. ಒತ್ತುವರಿ ತೆರವುಗೊಂಡ ನಂತರ ಗಡಿ ನಿರ್ಧರಣೆ ಮಾಡಬೇಕು ಎಂದು ಆದೇಶದಲ್ಲಿ ಷರತ್ತುಗಳ ವರ್ಗದಲ್ಲಿ ಸೂಚಿಸಲಾಗಿದೆ.

ಒತ್ತುವರಿ ತೆರವು...


‘ದಕ್ಷಿಣ ತಾಲ್ಲೂಕಿನಲ್ಲಿ ಬರುವ ಬಿಬಿಎಂಪಿ ವ್ಯಾಪ್ತಿಯ ಕೆರೆ, ಕುಂಟೆ, ಹಳ್ಳ, ರಾಜಕಾಲುವೆ ಒತ್ತುವರಿ ತೆರವಿಗೆ ಅಧಿಕಾರಿಗಳ ತಂಡವನ್ನು ವಾರ್ಡ್‌ವಾರು ರಚಿಸಲು ಆಲೋಚಿಸಲಾಗಿದೆ. ಈ ಬಗ್ಗೆ ಜಂಟಿ ತಂಡವನ್ನು ಅ.3ರಂದು ರಚಿಸಲಾಗುತ್ತದೆ. ಈ ಮೂಲಕ ದಕ್ಷಿಣ ತಾಲ್ಲೂಕು ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ದಕ್ಷಿಣ ತಾಲ್ಲೂಕು ತಹಶೀಲ್ದಾರ್‌ ದಿನೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.