ADVERTISEMENT

ಕಾಲ್ತುಳಿತ ಪ್ರಕರಣ | ತಲಾ ₹ 1 ಕೋಟಿ ಪರಿಹಾರ ನೀಡಲು ಸಿ.ಎಂ.ಇಬ್ರಾಹಿಂ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 23:00 IST
Last Updated 7 ಜೂನ್ 2025, 23:00 IST
<div class="paragraphs"><p>ಸಿ.ಎಂ.ಇಬ್ರಾಹಿಂ</p></div>

ಸಿ.ಎಂ.ಇಬ್ರಾಹಿಂ

   

ಬೆಂಗಳೂರು: ಆರ್‌ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಲ್ಲಿ ಅಮಾಯಕರು ಬಲಿಯಾಗಿದ್ದು, ಅವರ ಕುಟುಂಬಗಳಿಗೆ ₹ 1 ಕೋಟಿ ಹಾಗೂ ಗಾಯಾಳುಗಳಿಗೆ ₹ 25 ಲಕ್ಷ ಪರಿಹಾರ ನೀಡಬೇಕು ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಆಗ್ರಹಿಸಿದರು. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಣ ಕೊಟ್ಟು ಆಟಗಾರರನ್ನು ಖರೀದಿಸುವ ಐಪಿಎಲ್ ಕ್ರಿಕೆಟ್ ದೇಶದ ಅತಿ ದೊಡ್ಡ ಜೂಜು ಕ್ರೀಡೆ. ಇದರ ಹುಚ್ಚು ಅಭಿಮಾನದಿಂದಾಗಿ ಕೋಟ್ಯಂತರ ರೂಪಾಯಿ ಕಳೆದುಕೊಂಡವರಿದ್ದಾರೆ. ಈ ಜೂಜಾಟದ ಕ್ರೀಡೆಯನ್ನು ದೇಶದಿಂದಲೇ ನಿಷೇಧಿಸಲು ಬಿಸಿಸಿಐ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಐಪಿಎಲ್‌ನಲ್ಲಿ ಗೆದ್ದವರನ್ನು ವಿಧಾನಸೌಧದ ಮುಂಭಾಗಕ್ಕೆ ಕರೆತಂದು ಸರ್ಕಾರ ಸನ್ಮಾನಿಸಲು ಅವರೇನು ಪಹಲ್ಗಾಂನಲ್ಲಿ ನಾಗರಿಕರ ರಕ್ಷಣೆಗೆ ಹೋರಾಡಿದವರೇ? ಹಾಕಿ, ವಾಲಿಬಾಲ್, ಕಬಡ್ಡಿಯಂತೆ ದೇಶಿಯ ಕ್ರೀಡೆಗಳು. ಕ್ರಿಕೆಟ್‌ ದೇಶಿಯ ಕ್ರೀಡೆಯಲ್ಲ. ಅದಕ್ಕೆ ಅಷ್ಟೊಂದು ಮಾನ್ಯತೆ ಯಾಕೆ ನೀಡಬೇಕು? ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಥಳಾವಕಾಶ ಕಡಿಮೆ ಇದ್ದರೂ ಪೊಲೀಸರ ಅನುಮತಿ ಇಲ್ಲದೇ ಭಾರಿ ಸಂಖ್ಯೆಯಲ್ಲಿ ಸೇರಲು ಅವಕಾಶ ಯಾಕೆ ನೀಡಿದರು ಎಂದು ಪ್ರಶ್ನಿಸಿದರು.

ಸರ್ಕಾರ ಹಾಗೂ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್, ಆರ್‌ಸಿಬಿ ಮ್ಯಾನೇಜ್‌ಮೆಂಟ್ ಯಾವುದೇ ಮುಂಜಾಗ್ರತಾ ಕ್ರಮ ವಹಿಸದೆ ಲೋಪವೆಸಗಿವೆ. ಅವಘಡಕ್ಕೆ ಕಾರಣರಾದ ಎಲ್ಲಾ ತಪ್ಪಿತಸ್ಥರಿಗೂ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿಯಾಗಿ ಕಾರ್ಯಕ್ರಮ ಆಯೋಜನೆಗೆ ನಿರ್ಧಾರ ಕೈಗೊಳ್ಳುವುದಿಲ್ಲ. ಕೆಲವರ ಪ್ರೇರಣೆಯಿಂದ ಹೀಗಾಗಿದೆ. ಗೋವಿಂದರಾಜು ಅವರನ್ನು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಸಲಾಗಿದೆ. ತನಿಖೆ ಬಳಿಕ ತಪ್ಪಿತಸ್ಥರು ಯಾರು ಎಂಬುದು ಎಲ್ಲವೂ ಗೊತ್ತಾಗಲಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ‘ಐಪಿಎಲ್ ಕ್ರಿಕೆಟ್ ಎಂಬುದು ಮಟ್ಕಾ, ರಮ್ಮಿಯಂತೆ ದೊಡ್ಡ ಜೂಜು ದಂಧೆ. ಸರ್ಕಾರ ತನ್ನ ಪ್ರಚಾರಕ್ಕಾಗಿ ಸಂಭ್ರಮಾಚರಣೆ ನಡೆಸಿದೆ. ಸರಿಯಾಗಿ ನಿಭಾಯಿಸಲು ಆಗದೆ 11 ಮಂದಿ ಮೃತಪಪಟ್ಟ ಮೇಲೆ ಈಗ ಕಣ್ಣೀರು ಸುರಿಸುವ ಹೊಸ ನಾಟಕ ಶುರುಮಾಡಿದ್ದಾರೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.