
ಬೆಂಗಳೂರು: ತ್ಯಾಜ್ಯ, ವಾಯುಮಾಲಿನ್ಯ, ಪ್ಲಾಸ್ಟಿಕ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸೂಚಿಸಿದ ಐದು ಸ್ಟಾರ್ಟ್ಅಪ್ಗಳನ್ನು ಅಂತಿಮವಾಗಿ ಆಯ್ಕೆ ಮಾಡಿದ್ದು, ತಲಾ ₹25 ಲಕ್ಷ ಬಹುಮಾನ ಘೋಷಿಸಲಾಯಿತು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಸಹಯೋಗದಲ್ಲಿ ಅನ್ಬಾಕ್ಸಿಂಗ್ ಬಿಎಲ್ಆರ್ ಆಯೋಜಿಸಿದ್ದ ‘ನಮ್ಮ ಬೆಂಗಳೂರು ಚಾಲೆಂಜ್’ ಸ್ಪರ್ಧೆಯ ವಿಜೇತ ಐದು ತಂಡಗಳನ್ನು ಶನಿವಾರ ನಡೆದ ಸಮಾರಂಭದಲ್ಲಿ ಘೋಷಿಸಲಾಯಿತು.
ಆಯ್ಕೆಯಾದ ಐದು ಸ್ಟಾರ್ಟ್ಅಪ್ಗಳು: ಕಾರ್ಬನ್ ಕ್ರಾಫ್ಟ್ ಡಿಸೈನ್ ಸ್ಟಾರ್ಟ್ಅಪ್ (ಕೈಗಾರಿಕಾ ತ್ಯಾಜ್ಯಗಳ ಮರು ಬಳಕೆಯಿಂದ ಕಾರ್ಬನ್ ಬ್ಲಾಕ್ ತಯಾರಿಕೆ), ಸತಿಕ್ಯೂ ಕಾಂಕ್ರೀಟ್ ತಯಾರಕ ಸ್ಟಾರ್ಟ್ಅಪ್ (ಕಡಿಮೆ ಇಂಗಾಲ ಬಿಡುಗಡೆ ಮಾಡುವ ಮುಂದಿನ ಪೀಳಿಗೆಯ ಸಿಮೆಂಟ್ ಬೈಂಡರ್ಗಳ ಅಭಿವೃದ್ಧಿ), ಟೆಲ್ಲಸ್ ಹ್ಯಾಬಿಟಟ್ ಸ್ಟಾರ್ಟ್ಅಪ್ (ಕೊಳಚೆ ನೀರುಗಳ ಶುದ್ಧೀಕರಣ, ಮರುಬಳಕೆ), ಗೋ ಡು ಗುಡ್ ಸ್ಟಾರ್ಟ್ಅಪ್ (ಆಹಾರ ಪ್ಯಾಕೇಜಿಂಗ್ನಲ್ಲಿ ಪ್ಲಾಸ್ಟಿಕ್ ಪದರಗಳನ್ನು ಸಸ್ಯ ಆಧಾರಿತ ಲೇಪನಗೊಳಿಸುವುದು, ಆರೋಗ್ಯಕ್ಕೆ ಲಾಭದಾಯಕ) ಸನ್ಬರ್ಡ್ ಸ್ಟ್ರಾ ಸ್ಟಾರ್ಟ್ಅಪ್ (ತೆಂಗಿನ ಎಲೆಗಳಿಂದ ಸ್ಟ್ರಾ ತಯಾರಿಕೆ, ಬಳಕೆ ನಂತರ ಗೊಬ್ಬರವಾಗಲಿದೆ).
ಅನ್ಬಾಕ್ಸಿಂಗ್ ಬಿಎಲ್ಆರ್ನ ಅಧ್ಯಕ್ಷ ಮತ್ತು ಸಹ-ಸಂಸ್ಥಾಪಕ ಪ್ರಶಾಂತ್ ಪ್ರಕಾಶ್ ಮಾತನಾಡಿ, ‘ಉದ್ಯಾನ ನಗರಿ ಬೆಂಗಳೂರು ಆಧುನೀಕರಣಗೊಳ್ಳುತ್ತಿದ್ದಂತೆ ಹವಾಮಾನ ಒತ್ತಡಕ್ಕೆ ಒಳಗಾಗಿ ಹಲವಾರು ಸಮಸ್ಯೆ ಎದುರಿಸುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಲು ನಮ್ಮ ಬೆಂಗಳೂರು ಚಾಲೆಂಜ್ ಅನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ’ ಎಂದರು.
ಅನ್ಬಾಕ್ಸಿಂಗ್ ಬಿಎಲ್ಆರ್ನ ಸಹ-ಸಂಸ್ಥಾಪಕಿ ಜಿ ಸಿಇಒ ಮಾಲಿನಿ ಗೋಯಲ್, ಕಾರ್ಯಕ್ರಮದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್, ಸೋಶಿಯಲ್ ಆಲ್ಫಾ ಸಂಸ್ಥಾಪಕ ಮನೋಜ್ ಕುಮಾರ್, ಬಿಐಎಎಲ್ ಸಿಇಒ ಹರಿಮರಾರ್ ಪಾಲ್ಗೊಂಡಿದ್ದರು.
‘ಬೆಂಗಳೂರು ರಸ್ತೆ ಗುಂಡಿ ತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ಸಮಸ್ಯೆ ಎದುರಿಸುತ್ತಿದೆ. ಇಂತಹ ಸ್ಟಾರ್ಟ್ಅಪ್ಗಳು ಹೊರಬಂದು ಸಮಸ್ಯೆಗೆ ಪರಿಹಾರ ಸೂಚಿಸುವುದಕ್ಕೆ ನಮ್ಮ ಹೃತ್ಪೂರ್ವಕ ಸ್ವಾಗತವಿದೆ-ಎಂ. ಮಹೇಶ್ವರರಾವ್, ಮುಖ್ಯ ಆಯುಕ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.