ಬೆಂಗಳೂರು: ‘ಈಗ 1.30 ಕೋಟಿ ಇರುವ ಬೆಂಗಳೂರು ನಗರದ ಜನಸಂಖ್ಯೆಯು ಮುಂದಿನ ಹತ್ತು ವರ್ಷಗಳಲ್ಲಿ 2.50 ಕೋಟಿ ತಲುಪಲಿದೆ. ಅವೈಜ್ಞಾನಿಕ ನಗರೀಕರಣ ಮತ್ತು ಅತಿಕ್ರಮಣಗಳಿಂದಾಗಿ ಆರೋಗ್ಯಕ್ಕೆ ಸಂಬಂಧಿಸಿದ ಸವಾಲುಗಳು ಸಹ ಬೃಹದಾಗಿವೆ. ಇವುಗಳನ್ನು ಬಗೆಹರಿಸಲು ನಿರಂತರ ನಿಗಾ ವ್ಯವಸ್ಥೆ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಾ.ತ್ರಿಲೋಕಚಂದ್ರ ಪ್ರತಿಪಾದಿಸಿದರು.
‘ಬೆಂಗಳೂರು ಟೆಕ್ ಸಮ್ಮಿಟ್’ ಎರಡನೇ ದಿನವಾದ ಗುರುವಾರ ಅವರು ‘ಒನ್ ಹೆಲ್ತ್ ಮತ್ತು ಸಾಂಕ್ರಾಮಿಕಗಳ ತಡೆ’ ಎಂಬ ಗೋಷ್ಠಿಯಲ್ಲಿ ಮಾತನಾಡಿದರು.
‘ಜನರು ವಿವಿಧ ಕಾರಣಗಳಿಂದ ನಗರಗಳತ್ತ ವಲಸೆ ಬರುತ್ತಿದ್ದಾರೆ. ಆದರೆ, ನಮ್ಮ ನಗರಗಳ ಧಾರಣಾಶಕ್ತಿ ಬರಿದಾಗಿದೆ. ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿ ಜನರ ಆರೋಗ್ಯ ಕಾಪಾಡಲು ಸರಿಯಾದ ನೀತಿ ಮತ್ತು ಆಡಳಿತ ಪ್ರಮುಖವಾಗಿವೆ’ ಎಂದು ಎಚ್ಚರಿಕೆ ನೀಡಿದರು.
‘ಆರೋಗ್ಯ ಎಂದರೆ ಕೇವಲ ಮನುಷ್ಯ ಕೇಂದ್ರಿತವಲ್ಲ. ಇದರಲ್ಲಿ ಪರಿಸರ, ಪ್ರಾಣಿ ಮತ್ತು ಅರಣ್ಯಗಳನ್ನು ಸಹ ಒಳಗೊಳ್ಳಬೇಕು. ಏಕೆಂದರೆ, ಇತ್ತೀಚಿನ ವರ್ಷಗಳಲ್ಲಿ ಡೆಂಗೆ, ಚಿಕೂನ್ಗುನ್ಯ ಸೇರಿದಂತೆ ಹಲವು ಪ್ರಾಣಿಜನ್ಯ ರೋಗಗಳನ್ನು ಎದುರಿಸಿದ್ದೇವೆ. ಹೀಗಾಗಿ, ಪ್ರಾಣಿಗಳಿಂದ ಹಬ್ಬುವ ರೋಗಗಳ ಪ್ರಮಾಣ ಶೇ 75ರಷ್ಟು ಇರುವುದು ಕಳವಳಕಾರಿಯಾಗಿದೆ’ ಎಂದು ಅವರು ವಿವರಿಸಿದರು.
‘ನಗರಗಳಲ್ಲಿ ತ್ಯಾಜ್ಯ, ಮಾಲಿನ್ಯ, ಧೂಳು, ಇಂಗಾಲದ ಕಾರುವಿಕೆ ಎಲ್ಲವೂ ಅಂಕೆ ಮೀರಿವೆ. ಇವುಗಳನ್ನು ಬಗೆಹರಿಸಲು ಎಷ್ಟೇ ಪ್ರಯತ್ನಪಟ್ಟರೂ ಅವು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಇವುಗಳನ್ನು ಬಗೆಹರಿಸಲು ವಾರ್ಡ್ ಮತ್ತು ಸಮುದಾಯಗಳ ಮಟ್ಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.
ಇದೇ ಗೋಷ್ಠಿಯಲ್ಲಿ ಮಾತನಾಡಿದ ಡಾ.ಫರಾ ಇಷ್ತಿಯಾಕ್ ಅವರು, ‘ನಗರೀಕರಣದ ಸ್ವರೂಪವೇ ಹಲವು ಸಮಸ್ಯೆಗಳ ಮೂಲವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಆಧಾರದ ಮೇಲೆ ನಗರೀಕರಣದ ಸ್ವರೂಪವನ್ನೇ ಆಮೂಲಾಗ್ರವಾಗಿ ಬದಲಿಸಿಕೊಳ್ಳಬೇಕಾದ ತುರ್ತು ನಮ್ಮ ಎದುರು ಇದೆ. ಮುಖ್ಯವಾಗಿ ಎಲ್ಲ ನಗರಗಳಲ್ಲೂ ಅಲ್ಲಿರುವ ಕೆರೆಕಟ್ಟೆ ಮತ್ತು ಇನ್ನಿತರ ನೀರಿನ ಮೂಲಗಳನ್ನು ಸುಸ್ಥಿತಿಯಲ್ಲಿ ಸಂರಕ್ಷಿಸಿಕೊಳ್ಳಬೇಕು‘ ಎಂದು ಸಲಹೆ ನೀಡಿದರು.
ಗೋಷ್ಠಿಯಲ್ಲಿ ಡಾ.ಪರಮೇಶ್, ಡಾ.ವರ್ಷಾ ಶ್ರೀಧರ್ ಮತ್ತು ಡಾ.ಸಿಂಧೂರ ಗಣಪತಿ ಅವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.