ಬೆಂಗಳೂರು: ಟೆಕಿಯೊಬ್ಬರಿಗೆ ಕರೆ ಮಾಡಿದ್ದ ಸೈಬರ್ ವಂಚಕರು, ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆದರಿಸಿ ₹2 ಕೋಟಿ ವಂಚಿಸಿದ್ದಾರೆ. ಈ ಸಂಬಂಧ ವೈಟ್ಫೀಲ್ಡ್ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯೂತಿಪ್ಪಸಂದ್ರ ನಿವಾಸಿ, ಸಾಫ್ಟ್ವೇರ್ ಉದ್ಯೋಗಿ ಹಣ ಕಳೆದುಕೊಂಡಿದ್ದಾರೆ. ಟೆಕಿ ನೀಡಿದ ದೂರು ಆಧರಿಸಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ಗಳಾದ 319(2), 318(4) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸೈಬರ್ ಅಪರಾಧ ವಿಭಾಗದ ಪೊಲೀಸರು ಹೇಳಿದರು.
‘ಡಿಜಿಟಲ್ ಅರೆಸ್ಟ್’ಗೆ ಒಳಗಾಗುವ ಭಯದಲ್ಲಿ ವಂಚಕರಿಗೆ ಹಣ ಕೊಡಲು ದೂರುದಾರೆ ಫ್ಲ್ಯಾಟ್ ಹಾಗೂ ನಿವೇಶನ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.
ಕೊರಿಯರ್ ಕಂಪನಿ, ಮುಂಬೈ ಪೊಲೀಸರ ಸೋಗಿನಲ್ಲಿ ಟೆಕಿಗೆ ಸೈಬರ್ ವಂಚಕರು ಕರೆ ಮಾಡಿ ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ನ್ಯೂತಿಪ್ಪಸಂದ್ರದಲ್ಲಿ ದೂರುದಾರೆ ಪುತ್ರನೊಂದಿಗೆ ನೆಲಸಿದ್ದಾರೆ. ನ.19ರಂದು ಕೊರಿಯರ್ ಕಂಪನಿ ಪ್ರತಿನಿಧಿಗಳ ಹೆಸರಿನಲ್ಲಿ ಕರೆ ಮಾಡಿದ್ದ ವಂಚಕರು, ‘ನಿಮ್ಮ ಹೆಸರಿನಲ್ಲಿರುವ ಕೊರಿಯರ್ನಲ್ಲಿ ಮಾದಕ ಪದಾರ್ಥಗಳು ದೊರೆತಿವೆ. ಆಧಾರ್ ಕಾರ್ಡ್ ಸಹ ಲಿಂಕ್ ಆಗಿದೆ. ಮುಂಬೈ ಪೊಲೀಸರು ನಿಮ್ಮನ್ನು ಬಂಧಿಸಲಿದ್ದಾರೆ’ ಎಂಬುದಾಗಿ ಬೆದರಿಸಿದ್ದರು.
‘ಬಂಧನದಿಂದ ಪಾರಾಗಲು ಕೆಲವು ದಾಖಲೆಗಳ ಪರಿಶೀಲನೆಗೆ ಒಳಗಾಗಬೇಕು. ನಾವು ಹೇಳುವವರೆಗೂ ನೀವು ಎಲ್ಲಿಯೂ ತೆರಳುವಂತಿಲ್ಲ. ಹೇಳಿದಂತೆ ಕೇಳಬೇಕು’ ಎಂದು ವಂಚಕರು ಸೂಚಿಸಿದ್ದರು. ದಾಖಲೆಗಳ ಪರಿಶೀಲನೆ ವೇಳೆ ಹಂತಹಂತವಾಗಿ ಹಣ ವರ್ಗಾವಣೆ ಮಾಡಬೇಕೆಂದೂ ಸೂಚಿಸಿದ್ದರು. ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ವಂಚಕರು ನೀಡಿದ್ದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಟೆಕಿ ವರ್ಗಾವಣೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.
‘ವಿಚಾರಣೆಗೆ ಸರಿಯಾಗಿ ಸಹಕರಿಸಬೇಕು. ಹೇಳಿದಂತೆ ಮಾಡದಿದ್ದರೆ ಮಗನ ಭವಿಷ್ಯಕ್ಕೆ ತೊಂದರೆ ಆಗುತ್ತದೆ ಎಂದು ನಕಲಿ ಮುಂಬೈ ಪೊಲೀಸರು ಬೆದರಿಕೆ ಹಾಕಿದ್ದರು. ಈ ಮಾತುಗಳಿಗೆ ಹೆದರಿದ್ದ ಟೆಕಿ, ಸೈಬರ್ ವಂಚಕರ ಸೂಚನೆಗಳನ್ನು ಪಾಲಿಸಿದ್ದರು. ಹಣ ವರ್ಗಾವಣೆಗಾಗಿ ಮಾಲೂರಿನಲ್ಲಿದ್ದ ಎರಡು ನಿವೇಶನ ಹಾಗೂ ವಿಜ್ಞಾನ ನಗರದಲ್ಲಿದ್ದ ಒಂದು ಫ್ಲ್ಯಾಟ್ ಕಡಿಮೆ ಬೆಲೆಗೆ ಮಾರಾಟ ಮಾಡಿ ವಂಚಕರಿಗೆ ಹಣ ನೀಡಿದ್ದರು. ಅದಾದ ಮೇಲೆ ಪೊಲೀಸ್ ಠಾಣೆಗೆ ತೆರಳಿ ನಿರಾಪೇಕ್ಷಣಾ ಪತ್ರ (ಎನ್ಒಸಿ) ಪಡೆದುಕೊಳ್ಳಿ, ಬಳಿಕ ನಿಮ್ಮ ಖಾತೆಗೆ ಹಣ ಬರಲಿದೆ ಎಂಬುದಾಗಿ ವಂಚಕರು ಟೆಕಿಗೆ ತಿಳಿಸಿದ್ದರು’ ಎಂದು ಪೊಲೀಸರ ಹೇಳಿದರು.
‘ಈ ಸಂಬಂಧ ಪೊಲೀಸರನ್ನು ದೂರುದಾರೆ ವಿಚಾರಿಸಿದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿತ್ತು. ಕೂಡಲೇ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ (1930) ಹಾಗೂ ವೈಟ್ಫೀಲ್ಡ್ ಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದರು’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.