ADVERTISEMENT

ಬೆಂಗಳೂರು ವಿ.ವಿ.ಯಲ್ಲಿ ಕಾನೂನುಬಾಹಿರ ಆಡಳಿತ: ಸಿಂಡಿಕೇಟ್ ಸದಸ್ಯರ ಆರೋಪ

ಸಿಂಡಿಕೇಟ್ ಸದಸ್ಯರ ಆರೋಪ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 20:40 IST
Last Updated 3 ಮಾರ್ಚ್ 2022, 20:40 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ಮತ್ತು ಸಿಂಡಿಕೇಟ್ ಸದಸ್ಯ ಕಾರ್ಯದರ್ಶಿಯಾಗಿರುವ ಪ್ರೊ. ಕೊಟ್ರೇಶ್‌ ಅವರು ಕಾನೂನುಬಾಹಿರವಾಗಿ ಸಿಂಡಿಕೇಟ್‌ ಸಭೆ ಮತ್ತು ಆಡಳಿತ ನಡೆಸುತ್ತಿದ್ದಾರೆ ಎಂದು ಸಿಂಡಿಕೇಟ್ ಸದಸ್ಯರು ಆರೋಪಿಸಿದ್ದಾರೆ.

ಜ.18ರಂದು ವಿಶೇಷ ಸಿಂಡಿಕೇಟ್ ಸಭೆ ಜರುಗಿಸಿದ್ದು, ರಾಜ್ಯಪಾಲರು ಮತ್ತು ಸರ್ಕಾರ ನೇಮಿಸಿದ 8 ಸದಸ್ಯರು ಭಾಗವಹಿಸದೆ ಇದ್ದರೂ ಕುಲಪತಿಗಳು ವಿಶೇಷ ಸಿಂಡಿಕೇಟ್ ಸಭೆ ನಡೆಸಿ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ ಎಂದು ಸಿಂಡಿಕೇಟ್‌ ಸದಸ್ಯ ಸುಧಾಕರ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಈ ಕುಲಪತಿ ಮತ್ತು ಕುಲಸಚಿವರು ಮಾತ್ರ ಮೊದಲ ಬಾರಿಗೆ ಈ ರೀತಿಯ ಕೆಟ್ಟ ದುರಾಡಳಿತದ ಬುನಾದಿ ಹಾಕಿದ್ದಾರೆ. ಕಾನೂನುಬಾಹಿರ ಸಭೆ ನಡೆಸಿ ವಿಶ್ವವಿದ್ಯಾಲಯದ ನಿಯಮಗಳ ಉಲ್ಲಂಘನೆಯನ್ನು ಮಾಡಿದ್ದಾರೆ. ಆದ್ದರಿಂದ ಈ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಊರ್ಜಿತವಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ಕುಲಪತಿ ಮತ್ತು ಕುಲಸಚಿವರು ಸಿಂಡಿಕೇಟ್‌ನಲ್ಲಿ ಚರ್ಚಿಸಿದ ವಿಷಯಗಳ ಗೋಪ್ಯತೆಯನ್ನು ಕಾಪಾಡದೆ ಬೋಧಕೇತರ ನೌಕರರ ಸಂಘದ ಸಿಬ್ಬಂದಿಗೆ ತಿಳಿಸಿ, ಕಾನೂನು ಉಲ್ಲಂಘನೆ ಮಾಡಿ ವಿಶ್ವವಿದ್ಯಾಲಯದ ಶಾಂತಿಯನ್ನು ಕದಡಿ, ಅಶಾಂತಿ ವಾತಾವರಣ ಸೃಷ್ಟಿಸಲು ಪರೋಕ್ಷವಾಗಿ ಕಾರಣರಾಗಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಅಶಾಂತಿ ನಿರ್ಮಾಣವಾಗುವುದಕ್ಕೆ ಕುಮ್ಮಕ್ಕು ನೀಡುತ್ತಿರುವ ಕುಲಪತಿ ಮತ್ತು ಕುಲಸಚಿವರ ಮೇಲೆ ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.