ಬೆಂಗಳೂರು: ‘ಎಲ್ಲಾ ಜೀವಿಗಳಲ್ಲಿ ಕರುಣೆಯನ್ನು ಬೆಳೆಸುವ ಅಭಿಧಮ್ಮದ ಕುರಿತು ಯುವ ಜನಾಂಗ ಅಧ್ಯಯನ ಮಾಡಬೇಕು’ ಎಂದು ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಬಿ.ರಮೇಶ್ ಸಲಹೆ ನೀಡಿದರು.
ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಕೇಂದ್ರ ಆಯೋಜಿಸಿದ್ದ ‘ವಿದ್ಯಾರ್ಥಿ ಜೀವನದ ತಿಳಿವಳಿಕೆ–ಒಂದು ವಿಶ್ಲೇಷಣಾತ್ಮಕ ಪ್ರತಿಫಲನ’ ಎಂಬ ವಿಶೇಷ ಶೈಕ್ಷಣಿಕ ಧಮ್ಮ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಅಭಿಧಮ್ಮದ ಅಧ್ಯಯನವು ಶೈಕ್ಷಣಿಕ ಸಮುದಾಯಕ್ಕೆ ಅತ್ಯಂತ ಪ್ರಸ್ತುತವಾಗಿದೆ. ಇದು ವೈಜ್ಞಾನಿಕ ಮನೋಭಾವ, ನೈತಿಕ ಸಂವೇದನೆಯನ್ನೂ ಬೆಳೆಸಲಿದೆ’ ಎಂದು ತಿಳಿಸಿದರು.
ಪ್ರಧಾನ ಭಾಷಣ ಮಾಡಿದ ಆಚಾರ್ಯ ಸುಜಿನ್ ಬೋರಿಹರ್ನ್ವಾನಕೆಟ್, ‘ನೋಡುವ ಮತ್ತು ಕೇಳುವ ಪ್ರತಿಯೊಂದು ಕ್ಷಣದಲ್ಲಿಯೂ ಜಾಗೃತ ಅರಿವು ಹೊಂದುವುದು ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವ ಮಾರ್ಗವಾಗಿದೆ. ಗಡುವಿನ ಸಮಯ ಮತ್ತು ಸಾಧನೆಯ ಮಾನದಂಡಗಳಿಂದ ಪ್ರೇರಿತವಾಗಿರುವ ಇಂದಿನ ಶಿಕ್ಷಣ ಪದ್ಧತಿಯು ಒತ್ತಡ ಮತ್ತು ಭೌತಿಕ ವ್ಯಾಮೋಹ ಮೂಡಿಸುತ್ತಿದ್ದು, ಆಂತರಿಕ ಶಾಂತಿ ದೂರವಾಗುತ್ತಿದೆ’ ಎಂದರು.
‘ಧಮ್ಮದ ಪಾಲನೆಯು ವ್ಯಕ್ತಿಗಳು ತಮ್ಮ ಲೌಕಿಕ ಜವಾಬ್ದಾರಿಗಳೊಂದಿಗೆ ಸಮತೋಲಿತ ಮತ್ತು ಚಿಂತನಶೀಲ ಜೀವನವನ್ನು ನಡೆಸಲು ಸಹಕರಿಸುತ್ತದೆ. ವಿದ್ಯಾರ್ಥಿಗಳು ಚಿಂತನಶೀಲ ಅರಿವು ಮತ್ತು ವಿಮರ್ಶಾತ್ಮಕ ಪ್ರತಿಫಲನವನ್ನು ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.
ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕಿ ಕೆ.ಆರ್. ಜಲಜಾ, ಸಮಾಜಕಾರ್ಯ ವಿಭಾಗದ ಅಧ್ಯಾಪಕಿ ವಾಣಿಶ್ರೀ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.